ಮುಂಬೈ: ಮಹಾರಾಷ್ಟ್ರದ ಆಡಳಿತದಲ್ಲಿರುವ ಶಿವಸೇನೆಯ ನಾಯಕ ಸಂಜಯ್ ರಾವತ್ ಅವರ ಪತ್ನಿಗೆ ಇಡಿ ಸಮನ್ಸ್ ಜಾರಿಯಾಗಿದ್ದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳಲು ಕಾರಣವಾಗಿದೆ. ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯ ಮುಂದೆ ರಾಜ್ಯದ ಬಿಜೆಪಿ ಪ್ರದೇಶ ಕಾರ್ಯಾಲಯ ಎನ್ನುವ ಪೋಸ್ಟರ್ ಹಾಕಿದ ಶಿವಸೇನೆ ತನ್ನ ಆಕ್ರೋಶವನ್ನು ತೋರ್ಪಡಿಸಿದೆ.
ಪಿಎಂಸಿ ಬ್ಯಾಂಕ್ ಹಗರಣ ವಿಚಾರದಲ್ಲಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರಿಗೆ ಸಮನ್ಸ್ ಕಳುಹಿಸಲಾಗಿದೆ. ಈ ಹಿಂದೆಯೇ ಎರಡು ಬಾರಿ ಸಮನ್ಸ್ ಕಳುಹಿಸಲಾಗಿದ್ದು, ಎರಡೂ ಬಾರಿಯೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಮೂರನೇ ಬಾರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಈ ವಿಚಾರವಾಗಿ ಶಿವಸೇನೆ ಸಿಡಿದೆದ್ದಿದ್ದು, ಜಾರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡುತ್ತಿದೆ ಎಂದು ದೂರಿದೆ.
ಇದನ್ನೂ ಓದಿ: ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು ಗೊತ್ತಾ? ಸುಮ್ನೆ ಚಿಕಿನ್ ತಿನ್ಲಾ…’ ಎಂದ ಸಿದ್ದುಗೆ ಹಿಗ್ಗಾಮುಗ್ಗಾ ತರಾಟೆ
ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಸಿಬಿಐ ಎಲ್ಲವೂ ಕೇಂದ್ರ ಸರ್ಕಾರದ ನಿರ್ದೇಶನದಂತೆಯೇ ಕೆಲಸ ಮಾಡುತ್ತಿವೆ. ನಾವು ಕೇಂದ್ರ ಸರ್ಕಾರಕ್ಕೆ ನಮ್ಮದೇ ರೀತಿಯಲ್ಲಿ ಬುದ್ಧಿ ಕಲಿಸಲು ಸಿದ್ಧರಿದ್ದೇವೆ ಎಂದು ಸಂಜಯ್ ರಾವತ್ ಅವರು ಹೇಳಿದ್ದಾರೆ. ಅವರ ಈ ಹೇಳಿಕೆಯ ನಂತರ ಕೆಲವೇ ಕ್ಷಣಗಳಲ್ಲಿ ಮುಂಬೈನ ಇಡಿ ಕಚೇರಿಯ ಮುಂದೆ ಶಿವಸೇನೆಯ ಕಾರ್ಯಕರ್ತರು ಪೋಸ್ಟರ್ ಲಗತ್ತಿಸಿದ್ದಾರೆ. ಬಿಜೆಪಿ ಪ್ರದೇಶ ಕಾರ್ಯಾಲಯ ಎಂದಿದ್ದ ಪೋಸ್ಟರ್ನ್ನು ಹಾಕಲಾಗಿದೆ. ಮಧ್ಯಪ್ರವೇಶಿಸಿದ ಪೊಲೀಸರು ಪೋಸ್ಟರ್ನ್ನು ತೆಗೆದುಹಾಕಿದ್ದಾರೆ. (ಏಜೆನ್ಸೀಸ್)