ಹಾಸನ: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಂಭ್ರಮಾಚರಿಸಿದರು.
ಹೇಮಾವತಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಸಿಹಿ ಹಂಚಿ ಸಂತಸ ಹಂಚಿಕೊಂಡರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಮಾತನಾಡಿ, ಕರೊನಾ, ಅತಿವೃಷ್ಟಿ ನಡುವೆಯೂ ಸಿಎಂ ಬಿ.ಎಸ್. ಯಡಿಯೂರಪ್ಪ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಎರಡೂ ಕ್ಷೇತ್ರದ ಮತದಾರರು ಮನ್ನಣೆ ನೀಡಿದ್ದಾರೆ. ಕೆಆರ್ ಪೇಟೆಯಂತೆ ಶಿರಾದಲ್ಲಿಯೂ ಬಿ.ವೈ. ವಿಜಯೇಂದ್ರ ಮತ್ತು ಶಾಸಕ ಪ್ರೀತಂ ಜೆ. ಗೌಡರ ತಂತ್ರಗಾರಿಕೆ ಫಲ ನೀಡಿದೆ ಎಂದರು.
ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ಎನ್ಡಿಎ ಬಹುಮತ ಗಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಬಲ ಹೆಚ್ಚಿದೆ. ಇದೇ ರೀತಿ ಮುಂದಿನ ಎಲ್ಲ ಚುನಾವಣೆಯಲ್ಲಿ ಕೇಸರಿ ಕಲರವ ಮುಂದುವರಿಯಲಿದೆ ಎಂದರು.
ಬಿಜೆಪಿ ಕಾರ್ಯಕರ್ತರಾದ ವಿಕ್ರಂ, ಚಂದ್ರಶೇಖರ್, ರಾಹುಲ್ ಕಿಣಿ, ಸ್ವಾಮಿ, ಅರುಣ್, ರಮೇಶ್ ಹಾಗೂ ಇತರರಿದ್ದರು.