ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ‘ಎಫ್’ ಬ್ಲಾಕ್ನಲ್ಲಿ ಪಾರ್ಕ್ ಮತ್ತು ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗದ ಒತ್ತುವರಿ ಮಾಡಿಕೊಂಡಿದ್ದ ಎರಡು ಮನೆ, ಎರಡು ಶೆಡ್ ಮತ್ತು 5 ಪೆಟ್ಟಿಗೆ ಅಂಗಡಿಗಳನ್ನು ಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಜಾಗ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಹಲವು ವರ್ಷಗಳಿಂದ ದೂರುಗಳು ಕೇಳಿ ಬರುತ್ತಿವೆ. ನಿವೇಶನ ಹಂಚಿಕೆ ಭ್ರಷ್ಟಾಚಾರದ ಜತೆಗೆ ಒತ್ತುವರಿಗೆ ಕೆಲವು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪಗಳಿವೆ. ಯಾರದೋ ಹೆಸರಿಗೆ ಪತ್ರ, ಇನ್ನು ಯಾರದ್ದೋ ಆಸ್ತಿ. ಕೆಲವು ಮಧ್ಯವರ್ತಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಪಾಲಿಕೆ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಉಳ್ಳವರಿಗೆ ನಿವೇಶನ ನೀಡಿದ್ದಾರೆ ಎಂಬ ದೂರುಗಳಿದ್ದವು. ಮುಂದಿನ ದಿನಗಳಲ್ಲಿ ಎಲ್ಲ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗುವುದು. 37ಕ್ಕೂ ಹೆಚ್ಚು ಅಕ್ರಮ ಮನೆಗಳನ್ನು ಗುರುತಿಸಲಾಗಿದೆ. ಒತ್ತುವರಿ ಮಾಡಿಕೊಂಡ ಜಾಗ ಮತ್ತು ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಪಾಲಿಕೆ ಎಇಇ ನಿಂಗಪ್ಪ ತಿಳಿಸಿದ್ದಾರೆ.