ಬಸವಕಲ್ಯಾಣ: ಮಕ್ಕಳು ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಅವರಲ್ಲಿ ಏನು ಬಿತ್ತುತ್ತೆವೆಯೋ ಅದನ್ನು ಜೀವನ ಪರ್ಯಂತರ ಪಡೆಯುತ್ತವೆ. ಮಕ್ಕಳ ಮನಸ್ಸಿನಲ್ಲಿ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಕಾಳಜಿ ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ ಸಲಹೆ ನೀಡಿದರು.
ಹರಳಯ್ಯ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಕೂಟದಲ್ಲಿ ಮಾತನಾಡಿ, ಧರ್ಮದೊಳಗೆ ಜ್ಞಾನ ಮನುಷ್ಯತ್ವ ಒಳಗೊಂಡಿದೆ. ಮೆದುಳು ಮತ್ತು ಹೃದಯಕ್ಕೆ ನಿಕಟ ಸಂಪರ್ಕ ಇರುವುದರಿಂದ ಸದಾ ಸಕಾರಾತ್ಮಕ ಚಿಂತನೆ ಮಾಡಬೇಕು ಎಂದರು.
ಬಾಲ್ಯದಲ್ಲಿ ಕಲಿತ ವಿದ್ಯೆ ಜೀವನ ಪೂರ್ತಿ ಇರುವುದರಿಂದ ಒಳ್ಳೆಯದನ್ನೇ ಕಲಿಯಬೇಕು. ಧೈರ್ಯವಾಗಿದ್ದು ವಿವೇಚನೆ ಸ್ಥೆರ್ಯ, ಸೌಹಾರ್ದತೆ ಅವಶ್ಯ. ಮನುಷ್ಯತ್ವದಿಂದ ಬದುಕುವುದೇ ಸಮಾಜಕ್ಕೆ ನೀಡುವ ಬಹುದೊಡ್ಡ ಕೊಡುಗೆ ಎಂದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಮಕ್ಕಳೇ ನಮ್ಮ ದೇಶದ ನಿಜ ಸಂಪತ್ತು. ಒಳ್ಳೆ ಸಂಸ್ಕಾರದ ಜತೆಗೆ ಉತ್ತಮ ಪರಿಸರ ದೊರೆತರೆ ಮಗು ಎತ್ತರಕ್ಕೆ ಬೆಳೆಯುತ್ತದೆ. ಮನೆಯೇ ಮೊದಲ ಪಾಠಶಾಲೆ ತಾಯಿಯಿಂದ ಕಲಿತ ಸಂಸ್ಕಾರ ಮಹತ್ವದ್ದು. ಮಹಾನ ವ್ಯಕ್ತಿಗಳ ಸಾಧನೆಗೆ ತಾಯಿಯ ಸಂಸ್ಕಾರ ಕಾರಣ. ಮಕ್ಕಳೆಲ್ಲರೂ ನಡೆ, ನುಡಿ, ಆಚಾರ, ವಿಚಾರಗಳಲ್ಲಿ ಒಳ್ಳೆಯದಾಗಿರಬೇಕು ಎಂದು ಹೇಳಿದರು.
ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿ ಮಾತನಾಡಿ, ಅನುಭವ ಮಂಟಪದ ಮೂಲಕ ಸಾಮೂಹಿಕವಾಗಿ ಶಿಕ್ಷಣ ಜಾರಿಗೆ ತಂದವರು ಬಸವಣ್ಣ. ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ನಾವು ಬಂಡವಾಳಶಾಹಿಗಳಲ್ಲ ನಮ್ಮ ಮಕ್ಕಳೇ ನಮಗೆ ಬಂಡವಾಳ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಉದ್ಘಾಟಿಸಿದರು. ಚಿಂತಕ ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿದರು. ಭಾರತ ಸ್ಕೌಟ್ ಆ್ಯಂಡ್ ಆಡ್ ಗೈಡ್ಸ್ ತಾಲೂಕು ಕಾರ್ಯದರ್ಶಿ ಅನೀಲ ಶಾಸ್ತಿ, ಸಿಡಿಪಿಒ ಗೌತಮ ಸಿಂಧೆ, ಗೌರಿಶಂಕರ, ವಿಶ್ವನಾಥ ಖಂಡಾಳೆ ಇತರರಿದ್ದರು. ಸುಮತಿ ಸ್ವಾಗತಿಸಿದರು. ರೇಣುಕಾ ನಿರೂಪಣೆ ಮಾಡಿದರು.