- 204 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಆಗುತ್ತಿದೆ. ಸಾರ್ವಜನಿಕರು ವದಂತಿಗೆ ಕಿವಿಗೊಡದೆ ಪ್ರಗತಿಗೆ ಸಹಕರಿಸಬೇಕು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಮಂಡಕ್ಕಿ ಭಟ್ಟಿ ಲೇಔಟ್ನ (ಮೂರನೇ ವಾರ್ಡ್)ಲ್ಲಿ ಸಿ.ಸಿ.ರಸ್ತೆ, ಮನೆಗಳ ನಿರ್ಮಾಣ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ದಾವಣಗೆರೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿವಿಧ ಇಲಾಖೆಗಳ ಅನುದಾನ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2.85 ಕೋಟಿ ರೂ. ವೆಚ್ಚದಲ್ಲಿ ಜೋಗಲ್ ಬಾಬಾ ಲೇ ಔಟ್ನ ಖಲಂದರಿಯಾ ಮಸೀದಿ ಹತ್ತಿರ, 1ನೇ ಕ್ರಾಸ್ನಿಂದ 2 ಕ್ರಾಸ್ವರೆಗೆ ಹಾಗೂ 1ನೇ ಮುಖ್ಯರಸ್ತೆವರೆಗೆ ಸಿ.ಸಿ.ರಸ್ತೆ ಮತ್ತು ಚರಂಡಿ ಸ್ಲ್ಯಾಬ್ ಕಾಮಗಾರಿ ನಿರ್ಮಾಣ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 204 ಮನೆಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಪಾಲಿಕೆ ಸದಸ್ಯರಾದ ಎ.ಬಿ.ರಹೀಂಸಾಬ್, ಜಾಕೀರ್, ಶಫಿಕ್ ಪಂಡಿತ್, ಎನ್.ಕೆ.ಇಸ್ಮಾಯಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಎಚ್.ವೆಂಕಟೇಶ್, ಗುತ್ತಿಗೆದಾರ ರವಿಕುಮಾರ್, ರಾಮಬಾಬು, ಹಬೀಬ್ ಸಾಬ್, ಮಹ್ಮದ್ ಹರ್ಷದ್, ಅಕ್ಬರ್ ಅಲಿ, ಅಬ್ದುಲ್ ಜಬ್ಬಾರ್, ನಾಸೀರ್ ಸಾಬ್, ಅಲಿ, ಮಹಬೂಬ್, ಇಮ್ತಿಯಾಜ್ ಇದ್ದರು.