ಶಿವಮೊಗ್ಗ: ಕರೊನಾ ನಾಲ್ಕನೇ ಅಲೆ ಆತಂಕದ ಭೀತಿ ಇರುವುದರಿಂದ ಜಿಲ್ಲಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಕೆಲ ಕಠಿಣ ನಿಯಮಗಳು ಜಾರಿಗೊಳ್ಳಲಿವೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದ್ದು ಡಿ.31ರ ರಾತ್ರಿ 11.30ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಸೂಚಿಸಿದ್ದಾರೆ.
ಹೊಸ ವರ್ಷಾಚರಣೆ ಸಂಬಂಧ ಎಸ್ಪಿ ಕಚೇರಿಯಲ್ಲಿ ಬುಧವಾರ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆಯಲ್ಲಿ ಮಾತನಾಡಿ, ಸರ್ಕಾರದ ಆದೇಶದ ಅನ್ವಯ ಜ.1ರ ಬೆಳಗಿನ ಜಾವ 1ರೊಳಗೆ ಹೊಸ ವರ್ಷಾಚರಣೆ ಮುಕ್ತಾಯಗೊಳಿಸಬೇಕು ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಬಳಕೆಗೆ ಆಸ್ಪದ ನೀಡಬಾರದು. ನಿಗದಿ ಪಡಿಸಿದ ಶಬ್ಧ ಮಿತಿ ಮೀರಿ ಸೌಂಡ್ ಸಿಸ್ಟಂ ಬಳಸಬಾರದು. ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ನೋ ಮಾಸ್ಕ್ ನೋ ಎಂಟ್ರಿ ಬೋರ್ಡ್ಗಳನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಹಾಕಬೇಕು. ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ(9480803300 / 08182-261413) ಅಥವಾ ತುರ್ತು ಸಹಾಯವಾಣಿ(112)ಗೆ ಕರೆ ಮಾಡುವಂತೆ ಸೂಚಿಸಿದರು. ಡಿವೈಎಸ್ಪಿ ಡಿಸಿಆರ್ಬಿ ಪ್ರಭು, ಡಿವೈಎಸ್ಪಿ ಬಿ.ಬಾಲರಾಜ್, ಕುಂಸಿ ಠಾಣೆ ಇನ್ಸ್ಪೆಕ್ಟರ್ ಹರೀಶ್ ಪಟೇಲ್ ಹಾಜರಿದ್ದರು.
ವೃದ್ಧರು, ಗರ್ಭಿಣಿಯರು ದೂರ ಇರಿ: ಗುಂಪು ನಿಯಂತ್ರಿಸುವ ಸಂಬಂಧ ಒಂದಕ್ಕಿಂತ ಹೆಚ್ಚು ಪ್ರವೇಶ ದ್ವಾರ ನಿರ್ಮಿಸಬೇಕು. 60 ವರ್ಷ ಮೇಲ್ಪಟ್ಟ ವೃದ್ಧರು, ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸದೇ ಇರುವುದು ಸೂಕ್ತ ಎಂದು ಎಸ್ಪಿ ಮಿಥುನ್ಕುಮಾರ್ ಸಲಹೆ ನೀಡಿದರು. ಹೊಷ ವರ್ಷದ ಸಂಭ್ರಮದಲ್ಲಿ ಮದ್ಯಪಾನ ಮಾಡಿ ವಾಹನಗಳ ಚಾಲನೆ ಮಾಡದಂತೆ ಎಚ್ಚರಿಕೆ ನೀಡಿದರು.