ರಾಂಚಿ: ಸಿಬಿಎಸ್ಸಿ 10 ನೇ ತರಗತಿ ಪರೀಕ್ಷೆಯ ಫಲಿತಾಂಶ ಬರುವ ಒಂದು ದಿನದ ಮೊದಲು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಂಚಿಯ ಬೊಕಾರೊದ ಚಾಸ್ನಲ್ಲಿ ನಡೆದಿದೆ.
16 ವರ್ಷದ ಈ ವಿದ್ಯಾರ್ಥಿಯ ಹೆಸರು ರುದ್ರಪ್ರತಾಪ್ ಸಿಂಗ್. ಇವನು ರಾಜ್ಯದ ಬಿಜೆಪಿ ನಾಯಕಿ ರಿತುರಾಣಿ ಮಗ. ಮಂಗಳವಾರ ರಾತ್ರಿ ರುದ್ರಪ್ರತಾಪ್ ಸಿಂಗ್ ಮನೆಯಲ್ಲಿ ಒಬ್ಬನೇ ಇದ್ದ. ರಿತುರಾಣಿ ಪತಿಯೊಂದಿಗೆ ತನ್ನ ತಾಯಿಯ ಮನೆಗೆ ಹೋಗಿದ್ದರು. ತಮ್ಮ ಮನೆಯಿಂದ ತಾಯಿಯ ಮನೆ ಕೆಲವೇ ಮೀಟರ್ಗಳಷ್ಟು ದೂರ ಇರುವುದರಿಂದ ಮಗನನ್ನು ಮನೆಯಲ್ಲಿ ಒಬ್ಬನನ್ನೇ ಬಿಟ್ಟು ಇಬ್ಬರೂ ಹೋಗಿದ್ದರು. ಇತ್ತ ಮನೆಯಲ್ಲಿ ಇದ್ದ ಬಾಲಕ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪಾಲಕರ ಹೇಳಿಕೆಯನ್ನು ಪಡೆದಿದ್ದಾರೆ. ಸಿಬಿಎಸ್ಇ ಫಲಿತಾಂಶದ ಬಗ್ಗೆ ತಮ್ಮ ಮಗ ತುಂಬ ಟೆನ್ಷನ್ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.ಇದನ್ನೂ ಓದಿ: ಮಾನವರ ಮೇಲಿನ ಮೊದಲ ಹಂತದ ಪರೀಕ್ಷೆಯಲ್ಲಿ ಮಾಡೆರ್ನಾದ ಕೋವಿಡ್-19 ಚುಚ್ಚುಮದ್ದು ಪಾಸ್
ರಿಸಲ್ಟ್ ಏನೇ ಬಂದರೂ ತೊಂದರೆಯಿಲ್ಲ. ಹೆದರಬೇಡ..ಟೆನ್ಷನ್ ಮಾಡಿಕೊಳ್ಳಬೇಡ ಎಂದು ಪಾಲಕರು ತಮ್ಮ ಮಗನಿಗೆ ಹೇಳುತ್ತಲೇ ಇದ್ದರು. ಮಂಗಳವಾರ ರಾತ್ರಿ ಊಟಕ್ಕೆಂದು ರಿತುರಾಣಿಯವರ ತಾಯಿಯ ಮನೆಗೆ ಹೋಗುವಾಗಲೂ ಅದನ್ನೇ ಹೇಳಿಹೋಗಿದ್ದರು. ಅಷ್ಟೇ ಅಲ್ಲ, ಅಲ್ಲಿ ಹೋದ ಬಳಿಕವೂ ಕರೆ ಮಾಡಿದ್ದಾರೆ. ಇಲ್ಲಿಗೇ ಊಟಕ್ಕೆ ಬಾ ಎಂದು ಮತ್ತೆ ಒತ್ತಾಯಿಸಿದ್ದಾರೆ. ಆದರೆ ಬಾಲಕ ನನ್ನ ಮೈ ಸರಿಯಿಲ್ಲ. ನಾನು ಬರುವುದಿಲ್ಲ ಎಂದು ಹೇಳಿದ್ದಾನೆ.ಇದನ್ನೂ ಓದಿ: ಬಾಂಗ್ಲಾದೇಶ ಕ್ರಿಕೆಟಿಗ ಮೊರ್ಟಜ ಕರೊನಾ ಮುಕ್ತ, ಪತ್ನಿ ಇನ್ನೂ ಪಾಸಿಟಿವ್
ಊಟ ಮುಗಿಸಿ ಪಾಲಕರು ಮನೆಗೆ ಬಂದಾಗ ಒಳಗಿನಿಂದ ಬೀಗ ಹಾಕಿತ್ತು. ಎಷ್ಟು ಕರೆದರೂ ಮಗ ಬರಲಿಲ್ಲ. ಮಾತನ್ನೂ ಆಡಲಿಲ್ಲ. ಭಯಗೊಂಡ ಅವರು ಮನೆಯ ಬಾಗಿಲನ್ನು ಒಡೆದು ಒಳಗೆ ಹೋದಾಗ ಆತ ನೇಣುಹಾಕಿಕೊಂಡಿದ್ದ ಕಂಡು ಬಂತು. ಕೂಡಲೇ ಅವನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲಾಗಲೇ ಅವನು ಮೃತಪಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. (ಏಜೆನ್ಸೀಸ್)