ಕಲಬುರಗಿ: ದೇಶವು ಪ್ರಗತಿ ಪಥದತ್ತ ಸಾಗಬೇಕಾದರೆ ಆರ್ಥಿಕ ಸ್ಥಿತಿ ಸದೃಢವಾಗಿರಬೇಕು ಹಾಗೂ ಬ್ಯಾಂಕಿಂಗ್ ವ್ಯವಸ್ಥೆ ಸಾಮಾನ್ಯ ಜನರ ಕೈಗೆಟಕುವ ರೀತಿಯಲ್ಲಿ ಇರಬೇಕು. ಅಂತಹ ಕೆಲಸವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮಾಡುತ್ತಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧ ಆವರಣದಲ್ಲಿ ಎಸ್ಬಿಐ ಹೊಸ ಶಾಖೆ ಉದ್ಘಾಟಿಸಿದ ಅವರು, ಕೃಷಿ ಪ್ರಧಾನ ಜಿಲ್ಲೆಯ ರೈತರಿಗೆ ಅನೂಕೂಲವಾಗುವಂತಹ ಸೇವೆ ನೀಡಬೇಕು. ಈ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಬೇರೆ ಬೇರೆ ಕಾರ್ಖಾನೆ ಪ್ರಾರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಎಸ್ಬಿಐ ಇದಕ್ಕೆ ಸಹಕಾರ ನೀಡಬೇಕು ಎಂದರು.
ಬ್ಯಾಂಕ್ ಆಡಳಿತ ಕಚೇರಿ ಉಪ ಪ್ರಧಾನ ವ್ಯವಸ್ಥಾಪಕ ವಿ.ಆಬೀದ್ ಹುಸೇನ್ ಮಾತನಾಡಿ, ದೇಶಾದ್ಯಂತ ಸಾರ್ವಜನಿಕರು ಎಸ್ಬಿಐ ಜತೆ ನಂಟು ಹೊಂದಿದ್ದಾರೆ. ಇನ್ನಷ್ಟು ಹೆಚ್ಚು ಜನರು ಈ ಬ್ಯಾಂಕಿನ ಸೇವೆ ಪಡೆದುಕೊಳ್ಳಬೇಕು ಎಂದು ಕೋರಿದರು.
ಹೆಚ್ಚುವರಿ ಡಿಸಿ ಡಾ.ಶಂಕ್ರಣ್ಣ ವಣಿಕ್ಯಾಳ, ಬ್ಯಾಂಕ್ ಪ್ರಾದೇಶಿಕ ವ್ಯವಹಾರ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಕಾಶ್, ಶಾಖಾ ಪ್ರಬಂಧಕ ಪ್ರವೀಣ ಹೊಸಮನಿ ಇದ್ದರು.