ಉಗರಗೋಳ (ತಾ. ಸವದತ್ತಿ): ಸಪ್ತಗುಡ್ಡ, ಸಪ್ತಕೊಳ್ಳಗಳ ಮಧ್ಯೆ ನೆಲೆ ನಿಂತ ಶ್ರೀ ಕ್ಷೇತ್ರ ಯಲ್ಲಮ್ಮಗುಡ್ಡದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಜು. 21ರಿಂದ ಒಂದು ತಿಂಗಳ ಕಾಲ ಶ್ರಾವಣ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಕರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿ ಉಪಸ್ಥಿತಿಯಲ್ಲೇ ಧಾರ್ಮಿಕ ಚಟುವಟಿಕೆ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ದೇವಿಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ವಿಶೇಷ ಅಲಂಕಾರ ಮತ್ತು ವಿಶೇಷ ನೈವೇದ್ಯ ನೆರವೇರಿಸಲಾಗುವುದು. ‘ಭಾರತ ಬಹುಬೇಗ ಕರೊನಾ ಮುಕ್ತವಾಗಲಿ. ಸರ್ವರ ಬಾಳು ಬೆಳಗಲಿ’ ಎಂದು ಪ್ರಾರ್ಥಿಸಲಾಗುವುದು. ಸಂಪ್ರದಾಯದಂತೆ ವಿಧಿ-ವಿಧಾನ ನೆರವೇರಲಿವೆ. ಆದರೆ, ಕರೊನಾತಂಕ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ’ ಎಂದು ಯಲ್ಲಮ್ಮ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾಹಿತಿ ನೀಡಿದ್ದಾರೆ.
‘ಈಚೆಗೆ ಸವದತ್ತಿ ತಾಲೂಕಿನ ಹಲವೆಡೆ ಕರೊನಾ ಸೋಂಕು ಪ್ರಕರಣ ದೃಢಪಟ್ಟಿವೆ. ಹಾಗಾಗಿ, ಶ್ರಾವಣ ಮಾಸದಲ್ಲಿ ಭಕ್ತರು ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸದೇ, ಮನೆಯಲ್ಲಿ ಪ್ರಾರ್ಥಿಸಬೇಕು ಎಂದು ಹಳ್ಳಿಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಭಕ್ತರು ಸಹಕರಿಸಬೇಕು’ ಎಂದು ಕೋರಿದ್ದಾರೆ.