ಬೀರೂರು: ರೈಲ್ವೇ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಬೀರೂರು ರೈಲ್ವೇನಿಲ್ದಾಣ ಆವರಣದಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇಪಿಂಚಣಿ ಯೋಜನೆ ಜಾರಿ ಮಾಡುವಂತೆ ಒತ್ತಾಯಿಸಿ ಮೈಸೂರು ವಿಭಾಗದ ಬೀರೂರು ಶಾಖೆ ಸೌತ್ವೆಸ್ಟರ್ನ್ ರೈಲ್ವೇ ಮಜ್ದೂರ್ ಯೂನಿಯನ್ನಿಂದ ನಡೆದ ಸತ್ಯಾಗ್ರಹದಲ್ಲಿ ಯೂನಿಯನ್ ಕಾರ್ಯದರ್ಶಿ ಆನಂದ್ಕುಮಾರ್ ಮಾತನಾಡಿ, ಹಳೇ ಪಿಂಚಣಿ ಯೋಜನೆಯಲ್ಲಿ ನಮ್ಮ ಮೂಲ ಸಂಬಳಕ್ಕೆ ಅನುಸಾರವಾಗಿ ಬಡ್ತಿಯಾಗುತ್ತಿದೆ. ಇದರಿಂದ ನಾವು ಮತ್ತು ನಮ್ಮ ಕುಟುಂಬಕ್ಕೆ ಪಿಂಚಣಿ ಮತ್ತು ನಿಗದಿತ ಆದಾಯದ ಭದ್ರತೆ ಇರುತ್ತದೆ. ಆದರೆ ಹೊಸ ಪಿಂಚಣಿ ಯೋಜನೆಯಲ್ಲಿ ಯಾವುದೇ ಕನಿಷ್ಠ ಸೌಲಭ್ಯಗಳು ಇರುವುದಿಲ್ಲ ಎಂದು ದೂರಿದರು.
2004ರ ನಂತರ ನೇಮಕಾತಿಯಾದ ಎಲ್ಲ ರೈಲ್ವೇ ಕಾರ್ಮಿಕರಿಗೆ ಜಾರಿ ಮಾಡಿರುವ ಹೊಸ ಪೆನ್ಷನ್ ಪದ್ದತಿ ರದ್ದುಮಾಡಿ ಹಳೇ ಪೆನ್ಷನ್ ಪದ್ದತಿ ಜಾರಿಗೊಳಿಸಬೇಕು. ಇದಕ್ಕಾಗಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸತತ 4ದಿನ ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು. ಯೂನಿಯನ್ ಅಧ್ಯಕ್ಷ ಮಂಜುನಾಥ್, ಖಜಾಂಚಿ ಮಧು, ಉಪಾಧ್ಯಕ್ಷರಾದ ಅರುಣ್, ಸುರೇಶ್, ಉಪಕಾರ್ಯದರ್ಶಿ ವಿಜಯ್, ಸತೀಶ್, ಹರಿ ಓಂ ಮೀನ, ಸಂತೋಷ್ ಹಾಗೂ ಮಜ್ದೂರ್ ಯೂನಿಯನ್ ಸದಸ್ಯರು ಇದ್ದರು.