ಬೆಳಗಾವಿ: ಈ ಹಿಂದೆ ಹಿಂದು ಪದದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಬೆಳಗಾವಿಯ ಯಮಕನಮರಡಿಯಲ್ಲಿ ಬಹಿರಂಗ ಸವಾಲು ಹಾಕಿದ್ದರು.
ಈಗ ಇದಕ್ಕೆ ಪ್ರತಿಕ್ರಿಯೆ ನೀಡಿದ ‘ಓಪನ್ ಚರ್ಚೆಗೆ ನಾವು ಸಿದ್ಧರಿದ್ದೇವೆ. ಆದರೆ ನಾವು ಸೂಲಿಬೆಲೆಯ 10 ವರ್ಷಗಳ ಹೇಳಿಕೆಗಳ ಸರ್ಚ್ ಮಾಡುತ್ತಿದ್ದೇವೆ. ಅವರು ಹೇಳಿದ್ದು ಏನಾದ್ರೂ ಆಗಿದೆಯಾ ಎನ್ನುವುದನ್ನ ನೋಡುತ್ತಿದ್ದೇವೆ. ಸೂಲಿಬೆಲೆ ಹೇಳಿದ್ದ ಚಿನ್ನದ ರಸ್ತೆ ಎಲ್ಲಿದೆ ಎಂದು ಹುಡುಕುತ್ತಿದ್ದೇವೆ. ಬೆಳಿಗ್ಗೆ ಬೆಂಗಳೂರಿಂದ ಮಂಗಳೂರಿಗೆ ಹೋಗಿ ಸಂಜೆ ಮತ್ತೆ ಬೆಂಗಳೂರು ಊಟಕ್ಕೆ ಬರಬೇಕು ಆ ರಸ್ತೆ ಎಲ್ಲಿದೆ ಹುಡುಕುತ್ತಿದ್ದೇವೆ’ ಎಂದು ಕಾಲೆಳೆದಿದ್ದಾರೆ.
‘ಇದೇ ರಿತಿ ಸೂಲಿಬೆಲೆ ಇನ್ನೂ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ಒಂದಾದ್ರೂ ಸತ್ಯವಾಗಿದ್ದರೆ ನಾವು ಅವರ ಜೊತೆ ಚರ್ಚೆ ಮಾಡುತ್ತೇವೆ. ಇಂತಹ ವ್ಯಕ್ತಿಯ ಜೊತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ಕಾರ್ಯಕರ್ತರ ಹಾಗೂ ನನ್ನ ಅಭಿಪ್ರಾಯವಾಗಿದೆ’ ಎಂದು ಚ್ಯಾಲೆಂಜ್ ಅನ್ನು ತಳ್ಳಿ ಹಾಕಿದ್ದಾರೆ.
ಇದೇ ವೇಳೆ ಯತ್ನಾಳ್ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದು ಅವರೊಂದಿಗೆ ಬೇಕಾದರೆ ಒಂದು ಪ್ರತ್ಯೇಕ ವೇದಿಕೆ ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ‘ಗೋಕಾಕ್ಅನ್ನು ಬಿಹಾರ ಯತ್ನಾಳ್ ಅಂತ ಮೊದಲಿನಿಂದ ಹೇಳುತ್ತಿದ್ದಾರೆ. ಅದಕ್ಕೆ ಗೋಕಾಕ್ ಜನ ಉತ್ತರ ನೀಡುತ್ತಾರೆ. ಯತ್ನಾಳ್ಗೆ ವಿಜಯಪುರಕ್ಕೆ ಹೋಗಿ ಬೈಯಬೇಕಿಲ್ಲ, ಎಲ್ಲಿ ಬೈದರೂ ಹೋಗಿ ಮುಟ್ಟುತ್ತದೆ. ಮುಟ್ಟಿಸುವ ಕೆಲಸ ನಾವು ಮಾಡುತ್ತೇವೆ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಂಗಾರಪೇಟೆ ಪ್ರವೇಶಿಸಿದ ಪಂಚರತ್ನ ರಥಯಾತ್ರೆ: ರಾಗಿ ತೆನೆ ಕೊಟ್ಟು ಶುಭ ಕೋರಿದ ರೈತ ಮಹಿಳೆಯರು