ಮಂಗಳೂರು: ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ವತಿಯಿಂದ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಗುರುವಾರ ಸಾಮೂಹಿಕ ಸಮುದ್ರ ಪೂಜೆ ನೆರವೇರಿತು.
ಕದ್ರಿ ಜೋಗಿ ಮಠದ ಶ್ರೀ ರಾಜಯೋಗಿ ನಿರ್ಮಲಾನಾಥ್ಜೀ ಮಹಾರಾಜ್ ಶತಮಾನಗಳಿಂದ ಪೂರ್ವಜರು ಆಚರಿಸಿಕೊಂಡು ಬಂದಂತೆ ಮೀನುಗಾರಿಕೆಯ ಋತು ಆರಂಭದಲ್ಲಿ ಮೀನುಗಾರಿಕೆಗೆ ಪೂರಕವಾಗಿ ಸಮುದ್ರ ಪೂಜೆ ನೆರವೇರಿಸಿದರು.
ಏಳು ಪಟ್ಣ ಮೊಗವೀರ ಸಂಯುಕ್ತ ಮಹಾಸಭಾದ ಅಧ್ಯಕ್ಷ ಸುಭಾಶ್ಚಂದ್ರ ಕಾಂಚನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಉರ್ವ ಇದರ ಅಧ್ಯಕ್ಷ ಗೌತಮ್ ಸಾಲಿಯಾನ್ ಕೋಡಿಕಲ್ ಉಪಸ್ಥಿತಿಯಲ್ಲಿ ಪ್ರತಿ ಗ್ರಾಮದಿಂದ ಶೇಖರಣೆ ಮಾಡಿದ ಹಾಲು ತೆಂಗಿನಕಾಯಿಯನ್ನು ಶ್ರೀ ಬ್ರಹ್ಮ ಬಬ್ಬರ್ಯ ಬಂಟ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕಡಲ ಕಿನಾರೆಯಲ್ಲಿ ಭಜನೆಯೊಂದಿಗೆ ಗಂಗಾಮಾತೆಗೆ ಸಮರ್ಪಣೆ ಮಾಡಲಾಯಿತು.
ಸಭಾದ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್ ಬೆಂಗ್ರೆ, ಕಾರ್ಯದರ್ಶಿ ಶ್ಯಾಮಸುಂದರ್ ಕಾಂಚನ್, ಕೋಶಾಧಿಕಾರಿ ವಿಶು ಕುಮಾರ್, ಜೊತೆ ಕಾರ್ಯದರ್ಶಿ ರಂಜನ್ ಕಾಂಚನ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ನಾರಾಯಣ ಕೋಟ್ಯಾನ್, ಗ್ರಾಮದ ಗುರಿಕಾರರು, ಗ್ರಾಮದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.