ಜೈಪುರ: ತಮ್ಮ ವಿರುದ್ಧ ಬಂಡಾಯ ಎದ್ದಿದ್ದು, ಇದೀಗ ಪಕ್ಷಕ್ಕೆ ಮರಳಿರುವ ಸಚಿನ್ ಪೈಲಟ್ ಅವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ನಂಬಿಕೆ ಇತ್ತು. ಅವರ ಈ ಕ್ರಮದಿಂದ ನನ್ನ ಬಗ್ಗೆ ಅಷ್ಟೇ ಅಲ್ಲ, ಪಕ್ಷದ ಹೈಕಮಾಂಡ್ ಬಗ್ಗೆಯೂ ಅವರಿಗೆ ನಂಬಿಕೆ ಇದೆ ಎನ್ನುವುದು ಸಾಬೀತಾಗಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಬಗ್ಗೆ ಸಚಿನ್ಗೆ ನಂಬಿಕೆ ಇದ್ದ ಹೊರತಾಗಿಯೂ ಬಿಜೆಪಿಯ ಅವರು ಸಚಿನ್ ಅವರ ಹಾದಿ ತಪ್ಪಿಸಿದರು. ಅಲ್ಲದೆ, ನಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದರು ಎಂದು ಆರೋಪಿಸಿದರು.
ಸರ್ಕಾರವನ್ನು ಕೆಡವಲು ಬಿಜೆಪಿ ತನ್ನೆಲ್ಲ ಶಕ್ತಿಸಾಮರ್ಥ್ಯಗಳನ್ನು ಬಳಸಿತು. ಆದರೆ, ನಮ್ಮ ಪಕ್ಷದ ಒಬ್ಬೇ ಒಬ್ಬ ಶಾಸಕನನ್ನೂ ತನ್ನೆಡೆಗೆ ಸೆಳೆದುಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದರು. ಜೈಸಲ್ಮೇರ್ನಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ತಮ್ಮಲ್ಲಿ ಅಚಲ ನಂಬಿಕೆಯಿಟ್ಟು ಸರ್ಕಾರ ಉರುಳುದಂತೆ ನೋಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದ ಎಲ್ಲ ಶಾಸಕರನ್ನೂ ಅಭಿನಂದಿಸಿದ ಅಶೋಕ್ ಗೆಹ್ಲೋಟ್, ತಮ್ಮ ಕೊನೆಯುಸಿರಿನವರೆಗೂ ಈ ಎಲ್ಲ ಶಾಸಕರಿಗೆ ಆಭಾರಿ ಆಗಿರುವುದಾಗಿ ಹೇಳಿದರು.
ಇದನ್ನೂ ಓದಿ: ಪಾಂಚೋಲಿ ಕೊರಳಿಗೆ ದಿಶಾ ಆತ್ಮಹತ್ಯೆ ಪ್ರಕರಣ!; ದೂರು ದಾಖಲಿಸಿದ ಸೂರಜ್
ಬಿಜೆಪಿ ಅವರ ಕುದುರೆ ವ್ಯಾಪಾರದ ಹೊರತಾಗಿಯೂ ನಮ್ಮ ಪಕ್ಷದ ಯಾವೊಬ್ಬ ಶಾಸಕರೂ ಮಾರಾಟವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿತ್ತು. ಈ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ನನ್ನ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರೆಲ್ಲರನ್ನೂ ಸಮಾಧಾನಿಸುವುದು ನನ್ನ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಬಂಡಾಯ ಶಾಸಕರ ಅಸಮಾಧಾನಗಳನ್ನು ಬಗೆಹರಿಸಲು ಸಮಿತಿಯೊಂದನ್ನು ರಚಿಸಿದ್ದಾರೆ. ಆ ಸಮಿತಿಯ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಆಧರಿಸಿ, ಮುಂದೆ ಸಾಗಬೇಕಾದ ದಾರಿಯನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸೋಮವಾರದಂದು ಪಕ್ಷದ ಹೈಕಮಾಂಡ್ ಅನ್ನು ಭೇಟಿಯಾಗಿದ್ದ ಸಚಿನ್ ಪೈಲಟ್ ತಮ್ಮೆಲ್ಲ ಅಸಾಮಾಧಾನಗಳನ್ನು ಹೇಳಿಕೊಂಡು, ಇದನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಇದರಿಂದಾಗಿ ಅಂದಾಜು ಒಂದು ತಿಂಗಳಿಂದ ರಾಜಸ್ಥಾನದಲ್ಲಿ ಮೂಡಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿತ್ತು.