ಮುಂಬೈ: ಹಿಂದಿ ಧಾರಾವಾಹಿ ನೋಡುವವರಿಗೆ ನಟ ಪರ್ಲ ವಿ. ಪುರಿ ಚಿರಪರಿಚಿತ. ‘ನಾಗಿನ್ 3’, ‘ನಾಗಾರ್ಜುನ ಏಕ್ ಯೋಧ’, ‘ಬೆಪನಾಹ್ ಪ್ಯಾರ್’, ‘ಬ್ರಹ್ಮರಾಕ್ಷಸ್ 2’ ಸೇರಿದಂತೆ ಹಲವಾರು ಕಿರುತೆರೆಗಳಲ್ಲಿ ಮನೆಮಾತಾಗಿರುವ ಈ ನಟನ ಬದುಕೀಗ ಅಕ್ಷರಶಃ ಛಿದ್ರವಾಗಿದೆ. ಕುಟುಂಬದಲ್ಲಿ ಒಂದರ ಮೇಲೊಂದರಂತೆ ದುರಂತಗಳು ಬಂದೆರಗಿದ್ದು, ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟ ನೋವು ತೋಡಿಕೊಂಡಿದ್ದಾರೆ.
ಇವರ ವಿರುದ್ಧ ಅಪ್ರಾಪ್ತೆಯೊಬ್ಬಳ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪರ್ಲ್ ಅವರನ್ನು ಬಂಧಿಸಲಾಗಿತ್ತು. ತನ್ನ ಮೇಲೆ ಪರ್ಲ್ ಅತ್ಯಾಚಾರ ನಡೆಸಿರುವುದಾಗಿ ಬಾಲಕಿಯೇ ದೂರು ನೀಡಿದ್ದಳು. ಸಿನಿಮಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇವರು ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಆದರೆ ಕೊನೆಗೆ ಬಾಲಕಿಯ ತಾಯಿಯೇ ಖುದ್ದಾಗಿ ಹೇಳಿಕೆ ನೀಡಿ, ಕೌಟುಂಬಿಕ ಕಾರಣದಿಂದ ಮಗಳು ಸುಳ್ಳು ದೂರು ನೀಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ತಮ್ಮ ಪತಿಯ ಕುಮ್ಮುಕ್ಕು ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪರ್ಲ್ ಅವರಿಗೆ ಜಾಮೀನು ಮಂಜೂರು ಆಗಿತ್ತು. ರೇಪ್ ಕೇಸ್ ಪ್ರಕರಣದಿಂದ ತತ್ತರಿಸಿ ಹೋಗಿದ್ದ ಪರ್ಲ್ ಅವರು ಜೈಲಿನಿಂದ ಬರುತ್ತಿದ್ದಂತೆಯೇ ಆಘಾತದ ಮೇಲೆ ಆಘಾತವಾಗಿದ್ದು ಇದನ್ನು ಅವರು ವಿವರಿಸಿರುವುದು ಹೀಗೆ:
‘ಬದುಕು ಜನರನ್ನು ತನ್ನದೇ ಆದ ರೀತಿಯಲ್ಲಿ ಪರೀಕ್ಷಿಸುತ್ತಲೇ ಇರುತ್ತದೆ. ಅತ್ಯಾಚಾರದ ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಯಿತು. ಈ ನಡುವೆ ನಾನು ನನ್ನ ಪ್ರೀತಿಯ ಅಜ್ಜಿಯನ್ನು ನಾನು ಕಳೆದುಕೊಂಡೆ. ಈ ದುಃಖದಿಂದ ಹೊರಬರಲು ಸಾಧ್ಯವಾಗದೇ ನೋವಿನಲ್ಲಿ ಇರುವಾಗಲೇ 17ನೇ ದಿನಕ್ಕೆ ನನ್ನ ತಂದೆ ಕೂಡ ಮೃತಪಟ್ಟರು. ಇದರ ಬೆನ್ನಲ್ಲೇ ನನ್ನ ತಾಯಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಕಳೆದ ಕೆಲವು ದಿನಗಳು ನನ್ನ ಪಾಲಿಗೆ ದುಸ್ವಪ್ನವಾಗಿವೆ’ ಎಂದಿದ್ದಾರೆ.
ನಾನು ಎಲ್ಲರ ದೃಷ್ಟಿಯಲ್ಲಿ ಕ್ರಿಮಿನಲ್ ಆದೆ. ಇದು ನನ್ನ ಭದ್ರತೆಯ ಭಾವವನ್ನೇ ಛಿದ್ರಗೊಳಿಸಿದೆ. ಅಸಹಾಯಕನಾಗಿದ್ದೇನೆ. ಈಗಲೂ ನಾನು ಮರಗಟ್ಟಿದವನಂತೆ ಇದ್ದೇನೆ. ಆದರೆ ಈಗ ನನಗೆ ಪ್ರೀತಿ, ಬೆಂಬಲ ತೋರಿದ ಎಲ್ಲ ಸ್ನೇಹಿತರು ಮತ್ತು ಹಿತೈಷಿಗಳನ್ನು ಭೇಟಿಯಾಗುವ ಸಮಯ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಧನ್ಯವಾದಗಳು. ಸತ್ಯ ಮೇವ ಜಯತೆ ಎಂಬುದನ್ನು ಬಲವಾಗಿ ನಂಬಿದವನು ನಾನು. ದೇಶದ ಕಾನೂನು, ನ್ಯಾಯಾಂಗ ಮತ್ತು ದೇವರಲ್ಲಿ ನನಗೆ ಭರವಸೆ ಇದೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಇರಲಿ’ ಎಂದು ಪರ್ಲ್ ಬರೆದುಕೊಂಡಿದ್ದಾರೆ.
View this post on Instagram
ಮೂಡಬಿದ್ರೆಯಲ್ಲಿ ಬೆಚ್ಚಿಬೀಳಿಸೋ ಘಟನೆ: ಲಸಿಕೆ ಕೊಡಿಸೋ ನೆಪದಲ್ಲಿ ರಾತ್ರೋರಾತ್ರಿ ಮಹಿಳೆಯರ ಸಾಗಾಟ!