ಬೆಂಗಳೂರು: ತಮ್ಮ ಸುತ್ತಲಿನ ಬ್ಯಾಂಡ್ಸೆಟ್ ತಂಡವನ್ನು ನಿಯಂತ್ರಿಸದಿದ್ದರೆ, ಮುಂದೆ ನೀವು ಸಂಕಷ್ಟಕ್ಕೆ ಸಿಲುಕುತ್ತೀರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಅಧಿಕಾರದಲ್ಲಿರುವವರ ಕಣ್ಣಿಗೆ ಪೊರೆ ಬಂದರೆ, ಪಂಚೇದ್ರಿಯಗಳು ಸರಿಯಾಗಿ ಕೆಲಸ ಮಾಡದಿದ್ದರೆ ಜನರ ಕಷ್ಟಗಳ ಅರಿವಾಗುವುದಿಲ್ಲ. ಹಿಂದೆಲ್ಲ ರಾಜರ ಆಸ್ಥಾನದಲ್ಲಿ ಹೊಗಳು ಭಟ್ಟರಿರುತ್ತಿದ್ದರು. ಈಗ ಮುಖ್ಯಮಂತ್ರಿಗಳ ಸುತ್ತ ಬ್ಯಾಂಡ್ಸೆಟ್ನವರಿದ್ದಾರೆ.
ಅವರು ಎಲ್ಲ ಮುಖ್ಯಮಂತ್ರಿಗಳ ಕಾಲದಲ್ಲೂ ಇರುತ್ತಾರೆ. ಆದರೆ, ಈಗ ಅವರು ಬ್ಯಾಂಡ್ ಬಡಿಯುವುದು ಹೆಚ್ಚಾಗಿದೆ. ಅವರ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆಯಿಂದಿರಬೇಕು. ಅಧಿಕಾರವಿಲ್ಲದಾಗ ಅವರ್ಯಾರೂ ನಿಮ್ಮ ಜತೆ ಇರುವುದಿಲ್ಲ. ಆ ವ್ಯಾಮೋಹ ನಿಮ್ಮನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಬಂಡವಾಳದ ವಿನಿಮಯ ಕೇಂದ್ರ:
ಇತ್ತೀಚಿನ ವ್ಯವಸ್ಥೆಯಲ್ಲಿ ವಿಧಾನಸಭೆ, ಲೋಕಸಭೆಗಳು ಬಂಡವಾಳ ವಿನಿಮಯ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಚುನಾವಣೆಯಲ್ಲಿ ಮಾಡಿದ ಖರ್ಚನ್ನು ಇಲ್ಲಿ ಪಡೆಯಲಾಗುತ್ತದೆ. ಅದನ್ನು ಸರಿಪಡಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಕೆಪಿಎಂಇ ಕಾಯ್ದೆ ಬಗ್ಗೆ ಸ್ಪಷ್ಟಪಡಿಸಿ:
ಶಾಸನ ಸಭೆಯಲ್ಲಿ ಅನುಮೋದನೆಗೊಂಡ ಕಾಯ್ದೆಯನ್ನೇ ಈಗಿನವರು ನಿರ್ಲಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಕೆಪಿಎಂಇ ಕಾಯ್ದೆ ರೂಪಿಸಿ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಅನುಮೋದನೆ ಪಡೆದು, ರಾಜ್ಯಪಾಲರಿಂದಲೂ ಒಪ್ಪಿಗೆ ಪಡೆಯಲಾಯಿತು. ಆದರೆ, ಈಗಿನ ಸರ್ಕಾರ ಆ ಕಾಯ್ದೆಯ ಜಾರಿಯನ್ನೇ ಮರೆತಿದೆ. ಒಂದು ವೇಳೆ ಕಾಯ್ದೆ ಸರಿಯಿಲ್ಲ ಎಂದಾದರೆ ಅದರಲ್ಲಿನ ಲೋಪ ಸರಿಪಡಿಸಿ ಜಾರಿಗೊಳಿಸಬಹುದು. ಅದನ್ನು ಬಿಟ್ಟು, ಈ ರೀಯ ನಿರ್ಲಕ್ಷ್ಯ ಒಳ್ಳೆಯದಲ್ಲ ಎಂದು ಹೇಳಿದರು.
ಕಾಮೆಡ್-ಕೆ ಪರೀಕ್ಷಾರ್ಥಿಗಳಿಗೆ ಗುಡ್ನ್ಯೂಸ್: ಕೌನ್ಸೆಲಿಂಗ್ ವೇಳಾಪಟ್ಟಿ ಗೊಂದಲ ಈ ವರ್ಷ ಇರಲ್ಲ…
100 ಅಡಿ ಸುನಾಮಿ ಅಲೆಗೆ ಕೊಚ್ಚಿಹೋಗಿದ್ದ ಪೊಲೀಸ್ ಅಧಿಕಾರಿ 17 ವರ್ಷಗಳ ಬಳಿಕ ಜೀವಂತ ಪತ್ತೆ!
VIDEO: ಕೃಷಿ ಕಾಯ್ದೆ ವಿರೋಧಿ ಜಾಗವೇ ಕಲ್ಯಾಣ ಮಂಟಪ- ಪ್ರತಿಭಟನಾಕಾರರೇ ಅತಿಥಿಗಳು: ಹೀಗೊಂದು ಮದುವೆ…