ಮುಂಬೈ: ಯಾವುದಾದರೂ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದರೆ ಅದು ಅಪರಾಧ ಎಂದು 2018ಕ್ಕಿಂತ ಮುಂಚಿನ ಕಾನೂನಿನಲ್ಲಿ ಇತ್ತು. ಆದರೆ 2018ರಲ್ಲಿ ಕಾನೂನನ್ನು ಜಾರಿಗೆ ತಂದು ಅದನ್ನು ರದ್ದುಗೊಳಿಸಲಾಗಿದೆ. ಆದರೆ ಅದಕ್ಕಿಂತಲೂ ಮುಂಚೆ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಪ್ರೇಮಿಯೊಬ್ಬನ ಕಥೆ-ವ್ಯಥೆಯ ಘಟನೆ ಇದು… ಅದೃಷ್ಟವೆನ್ನುವುದು ಕೈಕೊಟ್ಟರೆ ಒಬ್ಬ ವ್ಯಕ್ತಿಯ ಬಾಳು ಹೇಗೆಲ್ಲಾ ಆಗಿಹೋಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಕೂಡ…
ಈ ಘಟನೆ ನಡೆದಿರುವುದು ಮುಂಬೈನಲ್ಲಿ. 2017ರ ಮೇ 13ರಂದು ಮುಂಬೈನ ಖಾರ್ ಪ್ರದೇಶದ ಯುವಕನೊಬ್ಬ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಾಲೇಜಿನ ದಿನಗಳಿಂದಲೇ ಈ ಪ್ರೇಮ ಶುರುವಾದದ್ದು ಎನ್ನಲಾಗಿದೆ. 2011 ರಿಂದ 2016 ರ ನಡುವೆ ಯುವಕ, ಈ ಯುವತಿಯೊಂದಿಗೆ ಕಾಲೇಜಿನಲ್ಲಿ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇಷ್ಟು ಸುದೀರ್ಘ ಅವಧಿಯವರೆಗೆ ಯುವತಿಯನ್ನು ಪ್ರೀತಿಸಿದ್ದ ಈತ, ಕೊನೆಗೆ ಮದುವೆಯಾಗುವಂತೆ ಆಕೆಯನ್ನು ಒತ್ತಾಯಿಸಿದ್ದ. ಅದಾಗಲೇ ಪ್ರೀತಿಯನ್ನು ರಿಜೆಕ್ಟ್ ಮಾಡಿದ ಯುವತಿ, ಯುವಕ ಪದೇ ಪದೇ ತನಗೆ ಹಿಂಸೆ ನೀಡುತ್ತಿದ್ದಾನೆ ಎಂದು ದೂರು ನೀಡಿದಳು.
ಇಷ್ಟಾಗುತ್ತಿದ್ದಂತೆಯೇ ನೊಂದುಕೊಂಡ ಯುವಕ, ಯುವತಿಯ ಮನೆಯ ಸಮೀಪ ಹೋಗಿ ವಿಷ ಸೇವಿಸಿದ, ಸಾಯದಿದ್ದಾಗ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡ ಎನ್ನಲಾಗಿದೆ. ಈತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಯೂ ಬದುಕುಳಿದ.
ಆಗಿನ ಕಾನೂನಿನಂತೆ ಆತ್ಮಹತ್ಯೆಗೆ ಪ್ರಯತ್ನದ ಹಿನ್ನೆಲೆಯಲ್ಲಿ ಇವನನ್ನು ಜೈಲಿಗೆ ಅಟ್ಟಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧನ ಮಾಡಲಾಗಿತ್ತು. ಇದರ ಅನ್ವಯ “ಆತ್ಮಹತ್ಯೆಗೆ ಪ್ರಯತ್ನಿಸುವ ಮತ್ತು ಅಂತಹ ಅಪರಾಧದ ಕಾರ್ಯವನ್ನು ಮಾಡಿದರೆ, ಒಂದು ವರ್ಷದವರೆಗೆ ವಿಸ್ತರಿಸಬಹುದಾದ ಅವಧಿಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ’ ಎಂದು ಹೇಳಲಾಗಿತ್ತು. ಇದರ ಅರ್ಥ ಅವನಿಗೆ ಒಂದು ವರ್ಷ ಶಿಕ್ಷೆಯಾಗಬೇಕಿತ್ತು.
ಆದರೆ ಅಲ್ಲಿಯೂ ಆತನ ಅದೃಷ್ಟ ನೆಟ್ಟಗಿರಲಿಲ್ಲ. ಕೋರ್ಟ್ನಲ್ಲಿ ಇದರ ವಿಚಾರಣೆ ಐದು ವರ್ಷ ನಡೆಯಿತು. ಅಲ್ಲಿಯವರೆಗೂ ಯುವಕ ಜೈಲಿನಲ್ಲಿಯೇ ಇದ್ದ. ಕೊನೆಗೆ ಈತನ ವಿರುದ್ಧ ಮಾಡಿರುವ ಆರೋಪಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಯಿತು. ಆದ್ದರಿಂದ ಕೋರ್ಟ್, ‘ಆರೋಪಿಯು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎಂದು ವಕೀಲರು ಸಾಕ್ಷಿ ಸಮೇತ ನಿರೂಪಿಸಬೇಕು. ಆದರೆ, ವಕೀಲರು ತಂದಿರುವ ಎಲ್ಲಾ ಸಾಕ್ಷಿಗಳು, ವ್ಯಕ್ತಿಯು ವಿಷ ಸೇವಿಸುವುದನ್ನಾಗಲಿ, ಚಾಕುವಿನಿಂದ ಇರಿದುಕೊಂಡಿರುವುದನ್ನು ಕಣ್ಣಾರೆ ನೋಡಿಲ್ಲ ಎಂದು ಹೇಳಿದ್ದಾರೆ. ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಾಬೀತುಮಾಡಲು ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಬಿಡುಗಡೆ ಮಾಡಲಾಗಿದೆ’ ಎಂದು ಆದೇಶಿಸಿದೆ!
ಮಳವಳ್ಳಿಯನ್ನು ಬೆಚ್ಚಿಬೀಳಿಸಿರೋ ಕೊಲೆ ಪ್ರಕರಣದಲ್ಲಿ ಮಾಜಿ ಶಾಸಕರ ಪುತ್ರ, ಇನ್ಸ್ಪೆಕ್ಟರ್ ಭಾಗಿ?
ಬೈಕ್ ಕೊಡ್ಸು, ಇಲ್ಲಾ ಗರ್ಭಪಾತ ಮಾಡ್ಸು: ಒಪ್ಪದ ತುಂಬು ಗರ್ಭಿಣಿಗೆ ತ್ರಿಬಲ್ ತಲಾಖ್ ಕೊಟ್ಟು ಹೊರಹಾಕಿದ!