ರಾಣೆಬೆನ್ನೂರ: ವಿದ್ಯಾರ್ಥಿಗಳು ಆಳವಾದ ಅಧ್ಯಯನಕ್ಕೆ ಮುಂದಾಗಬೇಕು. ಊರು, ಕುಟುಂಬ, ದೇಶ, ಸಮಾಜದ ಬಗ್ಗೆ ಕಳಕಳಿ ಹೊಂದಬೇಕು. ಅಭ್ಯಾಸದ ಜತೆಗೆ ಹೋರಾಟ ನಡೆಸುತ್ತಾ ಶಿಕ್ಷಣದ ಬಲವರ್ಧನೆಗೆ ಮುಂದಾಗಬೇಕು ಎಂದು ವಕೀಲ ಮೃತ್ಯುಂಜಯ ಗುದಿಗೇರ ಹೇಳಿದರು.
ಇಲ್ಲಿಯ ಮಾರುತಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ತಾಲೂಕು ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ದೇಶ ಕಟ್ಟಲು ಆಶ್ರಯವಾಗಬೇಕು. ಹೋರಾಟಗಳು ಮುಖ್ಯವಾಗಬೇಕು. ಶಿಕ್ಷಣ ಎಲ್ಲರಿಗೂ ಸಿಗುವಂತೆ ಹೋರಾಟ ನಡೆಸಿ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಅನ್ಯಾಯಕ್ಕೆ ನ್ಯಾಯವನ್ನು ಕಂಡುಕೊಳ್ಳಲು ಹೋರಾಟದಿಂದ ಮಾತ್ರ ಸಾಧ್ಯ ಎಂದರು.
ಸಂಘಟನೆಯ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಾದ ಬಸ್, ಸ್ಕಾಲರಶಿಪ್, ಹಾಸ್ಟೆಲ್, ಗ್ರಂಥಾಲಯ ವ್ಯವಸ್ಥೆ ಸೇರಿ ಹಲವಾರು ಸಮಸ್ಯೆಗಳ ಇತ್ಯರ್ಥಕ್ಕೆ ಸೇರಿ ಸೌಹಾರ್ದತೆಯ ಸ್ನೇಹ ಐಕ್ಯತೆಯಿಂದ ಈ ದೇಶ ನಾಡು ನುಡಿ, ಶಿಕ್ಷಣದ ಉಳಿವಿಗಾಗಿ ಹೋರಾಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಸೇರಬೇಕು ಎಂದರು.