ರಾಜಸ್ಥಾನ: ಬಿಜೈನಗರ ಜಿಲ್ಲೆಯ ಶ್ರೀಗಂಗಾನಗರ ಪ್ರದೇಶದ ಯಾದವ ಕಾಲೋನಿಯ ನಿವಾಸಿ ಶಾಲು ಅವರು ಮಂಗಳವಾರ ಬಿಜೈನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದರು. ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ನಂತರ ಅವರ ಕುಟುಂಬದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಬುಧವಾರದಂದು ನಾಲ್ವರು ಮಕ್ಕಳು ಸಾವನ್ನಪ್ಪಿದ ನಂತರ ಕುಟುಂಬದವರಿಗೆ ದುಃಖ ತಡೆಯಲಾಗಲಿಲ್ಲ.
ಶಿಶುಗಳ ಸಾವಿಗೆ ಕಡಿಮೆ ತೂಕ ಮತ್ತು ಅವಧಿಪೂರ್ವ ಹೆರಿಗೆ ಕಾರಣವೆಂದು ವೈದ್ಯರು ಹೇಳಿದ್ದಾರೆ. ಜಿಲ್ಲಾ ಆಸ್ಪತ್ರೆಯ ಪಿಎಂಒ ಡಾ.ಕೆ.ಎಸ್.ಕಮ್ರಾ ಮಾಹಿತಿ ನೀಡಿ, ಮಂಗಳವಾರ ಹೆರಿಗೆ ನೋವಿನಿಂದ ಶಾಲು ಅವರನ್ನು ಪತಿ ಗುಲ್ವಿಂದರ್ ಸಿಂಗ್ ಆಸ್ಪತ್ರೆಗೆ ದಾಖಲಿಸಿದರು. ಅವರನ್ನು ಲೇಬರ್ ರೂಮ್ಗೆ ದಾಖಲಿಸಲಾಯಿತು. ಮಧ್ಯಾಹ್ನ 3.30 ರ ಸುಮಾರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು ಎಂದು ತಿಳಿಸಿದರು. ಶಾಲು ಕೇವಲ 28 ವಾರಗಳ ನಂತರ ಶಿಶುಗಳಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ.
ವೈದ್ಯಕೀಯ ತಂಡ ಎಷ್ಟೇ ಪ್ರಯತ್ನಿಸಿದರೂ ನವಜಾತ ಶಿಶುಗಳ ಜೀವ ಉಳಿಸಲು ಸಾಧ್ಯವಾಗದೆ ಬುಧವಾರ ಮೃತಪಟ್ಟಿವೆ ಎಂದು ಡಾ.ಕಾಮ್ರಾ ತಿಳಿಸಿದ್ದಾರೆ. ಅಕಾಲಿಕ ಜನನದ ಮೂಲಕ ಜನಿಸಿದ ಇಂತಹ ಮಕ್ಕಳು ಅಪರೂಪವಾಗಿ ಬದುಕುಳಿಯುತ್ತಾರೆ. ಈ ಸಮಯದಲ್ಲಿ ಅವರ ಪ್ರಮುಖ ಅಂಗಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ . ಜತೆಗೆ ಎಸ್ಎನ್ಸಿಯುನಲ್ಲಿ ವಿಶೇಷ ಕಾಳಜಿಯನ್ನು ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರ ಪ್ರಕಾರ, ಇಂತಹ ಸಂದರ್ಭಗಳಲ್ಲಿ ತಾಯಂದಿರು ಸಹ ಅಪಾಯದಲ್ಲಿರುತ್ತಾರೆ. ಅಲ್ಟ್ರಾಸೌಂಡ್ ಮೂಲಕ ಮಹಿಳೆ ಶಾಲು ನಾಲ್ವರು ಮಕ್ಕಳೊಂದಿಗೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಕುಟುಂಬಸ್ಥರು ಆಕೆಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಬದಲು ಬಿಚ್ಚಿ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.