More

    ಜೆಡಿಎಸ್​ಗೆ ರಾಜಣ್ಣ ಕೊರವಿ ರಾಜೀನಾಮೆ

    ಹುಬ್ಬಳ್ಳಿ: ಜಾತ್ಯತೀತ ಜನತಾದಳ (ಜೆಡಿಎಸ್) ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಜಣ್ಣ ಕೊರವಿ ರಾಜೀನಾಮೆ ನೀಡಿದ್ದಾರೆ.

    ‘1989ರಿಂದ ಜನತಾ ಪರಿವಾರದಲ್ಲಿದ್ದೇನೆ, ಪಕ್ಷದ ಇತ್ತೀಚಿನ ಬೆಳವಣಿಗೆಗಳಿಂದ ತುಂಬಾ ಬೇಸರಗೊಂಡಿದ್ದೇನೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರೊಂದಿಗೆ ರ್ಚಚಿಸಿದ್ದರೂ ನನ್ನ ಪ್ರಯತ್ನಗಳು ವಿಫಲವಾಗಿವೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

    31 ವರ್ಷಗಳ ಪಕ್ಷದ ಒಡನಾಟದಲ್ಲಿ ಸಂತಸ, ಕಷ್ಟ ಎಲ್ಲವನ್ನೂ ಅನುಭವಿಸಿದ್ದೇನೆ. ಪ್ರಾದೇಶಿಕ ಪಕ್ಷವಾಗಿ ಯಾವ ಮಟ್ಟಕ್ಕೆ ಜೆಡಿಎಸ್ ಬೆಳೆಯಬೇಕಾಗಿತ್ತೋ ಅಷ್ಟು ಬೆಳೆಯಲಿಲ್ಲ. ಈ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರ ನಿರೀಕ್ಷೆಗಳು ಈಡೇರುತ್ತಿಲ್ಲ. ಈ ಎಲ್ಲ ನೋವಿನ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.

    ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವ ರಾಜಣ್ಣ ಕೊರವಿ, ಕಳೆದ ಬಾರಿ ಬಿಜೆಪಿಯ ಮಲ್ಲಿಕಾರ್ಜುನ ಗುಂಡೂರ ಅವರ ವಿರುದ್ಧ ಸುಮಾರು 500ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು.

    23ಕ್ಕೆ ಬಿಜೆಪಿ ಸೇರ್ಪಡೆ?: ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ವಿರುದ್ಧ ಎರಡು ಬಾರಿ ಜೆಡಿಎಸ್​ನಿಂದ ಸ್ಪರ್ಧೆ ಮಾಡಿರುವ ಕೊರವಿ, ಇದೀಗ ಸಾವಿರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಜ. 23ರಂದು ಅಧಿಕೃತವಾಗಿ ಪಕ್ಷ ಸೇರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

    ಸದ್ಯ ಜೆಡಿಎಸ್​ಗೆ ರಾಜಿನಾಮೆ ನೀಡಿದ್ದೇನೆ. ಹಿರಿಯರು, ಬೆಂಬಲಿಗರೊಂದಿಗೆ ಮಾತುಕತೆ ನಡೆಸುತ್ತಿದ್ದೇನೆ. ಸಂಕ್ರಮಣದ ನಂತರ ಯಾವ ಪಕ್ಷ ಸೇರಬೇಕೆಂಬುದನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ.
    | ರಾಜಣ್ಣ ಕೊರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts