ರಾಯಚೂರು: ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ನಾಯಕ ಸಮುದಾಯದ ರತ್ನಗಳಾಗಿದ್ದು, ಅವರ ಜೀವನ ಚರಿತ್ರೆಯನ್ನು ವಾಲ್ಮೀಕಿ ನಾಯಕ ಸಮುದಾಯದ ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೈ.ಕ. ವಾಲ್ಮೀಕಿ ನಾಯಕ ಸಮುದಾಯದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಹೇಳಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ನಾಯಕ ಸಮುದಾಯ ಸೋಮವಾರ ಹಮ್ಮಿಕೊಂಡಿದ್ದ ವಿಜಯನಗರ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಹಕ್ಕಬುಕ್ಕರು ಗಂಡುಗಲಿ ಕುಮಾರರಾಮ, ಶ್ರೀಕೃಷ್ಣದೇವರಾಯರ ಧೈರ್ಯ, ಸಾಹಸಗಳನ್ನು ಆದರ್ಶವಾಗಿಟ್ಟುಕೊಂಡು ಸಮುದಾನದ ಜನರು ಮುಂದೆ ಬರಬೇಕು ಎಂದರು.
ಪ್ರತಿ ವರ್ಷ ವಿಜಯನಗರ ಸಂಸ್ಥಾಪನಾ ದಿನ ಆಚರಿಸುವ ಮೂಲಕ ಹಕ್ಕಬುಕ್ಕರು, ಶ್ರೀಕೃಷ್ಣದೇವರಾಯರನ್ನು ಸ್ಮರಿಸಲಾಗುತ್ತಿದೆ. ನಮ್ಮ ಇತಿಹಾಸ ಪುರಷರನ್ನು ನೆನೆದು ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುತ್ತ ಸತ್ಯ, ಪರಿಶ್ರಮದ ಮಾರ್ಗದಲ್ಲಿ ನಡೆಯಬೇಕೆಂದರು.
ಸಮಾಜದ ಮುಖಂಡರಾದ ಡಾ.ಪ್ರಭು ಹುಲಿನಾಯಕ, ಡಾ.ಶಾರದಾ ಹುಲಿನಾಯಕ, ಯಲ್ಲಪ್ಪ ಜಾಲಿಬೆಂಚಿ, ಭೀಮರಾಯ ಹದ್ದಿನಾಳ, ವೀರಣ್ಣ ನಾಯಕ, ರಂಗಸ್ವಾಮಿ ನಾಯಕ, ರಾಘವೇಂದ್ರ, ಶಿವಕಾಂತಮ್ಮ, ಪೂರ್ಣಿಮಾ, ಅನಸೂಯಾ, ರಮೇಶ ನಾಯಕ, ರಾಮಕೃಷ್ಣ ನಾಯಕ, ಮಹಾನಂದ ನಾಯಕ ಇದ್ದರು.