ರಾಯಚೂರು: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ದಿಢೀರ್ ಮುಷ್ಕರ ನಡೆಸಿದ್ದರಿಂದ ಶುಕ್ರವಾರ ಬಸ್ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತಲ್ಲದೇ ನೌಕರರ ಮನವೊಲಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಯಿತು.
ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾದರೂ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ. ಬೆಳಗ್ಗೆ ಬೇರೆಡೆಯಿಂದ ಆಗಮಿಸಿದ ಬಸ್ಗಳನ್ನು ಬಸ್ ನಿಲ್ದಾಣದ ಹೊರಗಿನಿಂದಲೇ ಸಂಚಾರಕ್ಕೆ ಅವಕಾಶ ಮಾಡಿಕೊ ಡಲಾಗಿತ್ತು. ನಂತರ ನೌಕರರು ಆ ಬಸ್ಗಳ ಸಂಚಾರವನ್ನು ತಡೆಹಿಡಿದರು.
ಸಂಸ್ಥೆ ಹಿರಿಯ ಅಧಿಕಾರಿಗಳು ನಿಲ್ದಾಣಕ್ಕೆ ಆಗಮಿಸಿ ಕರ್ತವ್ಯಕ್ಕೆ ತೆರಳುವಂತೆ ಮನವೊಲಿಸಿದರೂ ಅದಕ್ಕೆ ನೌಕರರು ಒಪ್ಪಲಿಲ್ಲ. ಇದರಿಂದಾಗಿ ಬಸ್ ಸ್ಥಗಿತಗೊಂಡಿರುವ ವಿಚಾರ ತಿಳಿಯದೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ತಮ್ಮ ಸ್ವಗ್ರಾಮಗಳಿಗೆ ತೆರಳಲು ಪರದಾಡುವಂತಾಯಿತು.
ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಜೀಪ್ ಮತ್ತು ಆಟೋ ಚಾಲಕರು ದುಪಟ್ಟು ಹಣ ಕೇಳುವ ಮೂಲಕ ಪ್ರಯಾಣಿಕರ ಸುಲಿಗೆ ನಡೆಸುತ್ತಿರುವುದು ಕಂಡು ಬರುತ್ತಿತ್ತು. ಕರೊನಾ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಪಾಡುವ ಆದೇಶವನ್ನು ಗಾಳಿಗೆ ತೂರಿ ಜೀಪ್ನಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಕೊಂಡು ಹೋಗಲಾಗುತ್ತಿತ್ತು.
ಏಕಾಏಕಿ ಬಸ್ ಸಂಚಾರ ರದ್ದುಗಡಿಸಿದ್ದನ್ನು ಖಂಡಿಸಿ ಹಲವು ಪ್ರಯಾಣಿಕರು ಸಾರಿಗೆ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದ ಘಟನೆ ಜರುಗಿತು. ಬಹುತೇಕರು ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಜೀಪ್ ಮತ್ತು ಖಾಸಗಿ ವಾಹನಗಳಲ್ಲಿ ತೆರಳಿದರು.