ರಾಯಚೂರು: ಎರಡು ದಶಕಗಳ ಹಿಂದೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆಗೆ ಗರ್ಭನಾಳ ಮರುಜೋಡಣೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮಹಿಳೆ ಮತ್ತೊಂದು ಮಗುವಿಗೆ ಜನನ ನೀಡುವಂತೆ ಮಾಡುವಲ್ಲಿ ಸ್ಥಳೀಯ ಬೆಟ್ಟದೂರು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕದಿನ್ನಿ ಗ್ರಾಮದ ಸಿದ್ದಪ್ಪ ಮತ್ತು ಗಂಗಮ್ಮ ದಂಪತಿ ಒಂದು ಗಂಡು ಮಗು ಜನಿಸಿದ ನಂತರ 21 ವರ್ಷಗಳ ಹಿಂದೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ವರ್ಷದ ಹಿಂದೆ ಮಗ ಅಪಘಾತದಲ್ಲಿ ನಿಧನನಾಗಿದ್ದರಿಂದ ಮತ್ತೊಂದು ಮಗು ಪಡೆಯಲು ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದರು. ಆಸ್ಪತ್ರೆಯ ವೈದ್ಯ ಜಯಪ್ರಕಾಶ ಪಾಟೀಲ್ ಮತ್ತು ತಂಡವು ಗಂಗಮ್ಮಗೆ ಗರ್ಭನಾಳ ಮರುಜೋಡಣೆ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದರಿಂದ ಗಂಗಮ್ಮ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.