ರಾಯಚೂರಿನಲ್ಲಿ ಆಶೀರ್ವಚನ
ರಾಯಚೂರು: ಮಾನವನಿಗೆ ಮಾತ್ರ ಭಗವಂತ ಧರ್ಮಾಧಿಕಾರ ನೀಡಿದ್ದು, ಮನುಷ್ಯನ ಹೊರತು ಇತರ ಪ್ರಾಣಿಗಳು ಧರ್ಮಾಚರಣೆ ಮಾಡುವುದಿಲ್ಲ. ಇದು ಭಗವಂತ ಮನುಷ್ಯನಿಗೆ ಕೊಟ್ಟ ವರ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಇಷ್ಟಲಿಂಗ ಪೂಜೆ ಮತ್ತು ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ರಾತ್ರಿ ಆಶೀರ್ವಚನ ನೀಡಿದರು. ಭಸ್ಮ, ರುದ್ರಾಕ್ಷಿ ಹಾಗೂ ಇತರ ಸಾಂಪ್ರದಾಯಿಕ ಲಾಂಛನ ಧರಿಸಿದ ಮಾತ್ರಕ್ಕೆ ಧಾರ್ಮಿಕ ವ್ಯಕ್ತಿ ಆಗಲಾರ. ಸತ್ಯವನ್ನು ನುಡಿದು, ನಿಷ್ಠೆಯಿಂದ ಪೂಜಿಸಿದಾಗ ಮಾತ್ರ ಧಾರ್ಮಿಕ ವ್ಯಕ್ತಿಯಾಗುತ್ತಾನೆ ಎಂದರು.
ನಾವು ದೇಹವನ್ನು ಬಿಟ್ಟು ಹೋಗುವಾಗ ನಮ್ಮೊಂದಿಗೆ ಯಾರೂ ಬರುವುದಿಲ್ಲ. ಸ್ಮಶಾನದವರೆಗೆ ಮಾತ್ರ ಎಲ್ಲರೂ, ಎಲ್ಲವೂ ಬರುತ್ತವೆ. ಆದರೆ ನಾವು ಮಾಡಿದ ಪುಣ್ಯ ಕರ್ಮಗಳೇ ನಮ್ಮ ಜತೆಗೆ ಬರುತ್ತವೆ. ಬದುಕಿದ್ದಾಗ ಧರ್ಮವನ್ನು ಪಡೆದಾಗ ಮಾತ್ರ ಸದ್ಗತಿ ಸಿಗಲು ಸಾಧ್ಯ. ತಪಸ್ಸು ಮಾಡಿದ ಪುಣ್ಯಕ್ಕಿಂತ ಸತ್ಸಂಗ ಮಾಡಿದ ಪುಣ್ಯ ದೊಡ್ಡದು ಎಂದು ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಸಲಾಗಿದೆ. ಯಾವುದು ಮಾಡಬೇಕು, ಯಾವುದನ್ನು ಮಾಡಬಾರದೆಂದು ತಿಳಿದುಕೊಂಡು ಮುನ್ನಡೆಯಬೇಕು ಎಂದು ಕಾಶಿ ಜಗದ್ಗುರುಗಳು ಹೇಳಿದರು.