ರಾಯಚೂರು: ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಮೈಸೂರಿನ ಪರಂಪರೆ ಸಂಸ್ಥೆ, ಕರ್ನಾಟಕ ಸಂಘ ಮತ್ತು ಜಿಲ್ಲಾ ಕಸಾಪ ಸಹಯೋಗದಲ್ಲಿ ಮಹಾಕವಿ ರಾಘವಾಂಕರು ರಚಿಸಿದ ಹರಿಶ್ಚಂದ್ರ ಕಾವ್ಯದ ಮೇಲೆ ಐದು ದಿನಗಳ ಗಮಕ ಹಬ್ಬ ಸೋಮವಾರ ಆರಂಭಗೊಂಡಿತು.
ಗಮಕ ಹಬ್ಬ ವೀಕ್ಷಕರಿಗೆ ಸಂಗೀತ ರಸದೌತಣ ಉಣಬಡಿಸಿತು. ವಿದ್ವಾನ್ ಡಾ.ಸನತ್ ಕುಮಾರ್ ಸೋಮಯಾಜಿ ಮತ್ತು ವಿದ್ವಾನ್ ಅಚ್ಯುತ ಅವಧಾನಿ ಗಮಕ ಹಬ್ಬದಲ್ಲಿ ವಿವಿಧ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮ ಸಾಹಿತ್ಯಾಸಕ್ತರನ್ನು ಮಾತ್ರವಲ್ಲದೆ ಸಂಗೀತ ಪ್ರಿಯರನ್ನು ಸೆಳೆಯಿತು. ಮೊದಲ ದಿನ ಮೃಗಯಾ ಪ್ರಸಂಗದ ವಾಚನ ಮತ್ತು ವ್ಯಾಖ್ಯಾನ ಜರುಗಿತು.
ಬಿಆರ್ಬಿ ಕಾಲೇಜಿನ ಪ್ರಾಚಾರ್ಯೆ ಡಾ.ಶೀಲಾದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು. ಮೈಸೂರಿನ ಪರಂಪರೆ ಸಂಸ್ಥೆಯ ಕಾರ್ಯದರ್ಶಿ ಪಿ.ಕೃಷ್ಣಕುಮಾರ್ ಈವರೆಗೆ ರಾಜ್ಯದಲ್ಲಿ ಪರಂಪರೆಯಿಂದ ಏರ್ಪಡಿಸಿದ ಸಾಹಿತ್ಯಕ ಕಾರ್ಯಕ್ರಮಗಳ ವಿವರ ನೀಡಿದರು. ವಿಕಾಸ ಅಕಾಡೆಮಿ ಸಂಯೋಜಕ ರಾಜಶೇಖರ ಹಿರೇಮಠ ಮಾತನಾಡಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘ, ಮೈಸೂರಿನ ಪರಂಪರೆ ಸಂಸ್ಥೆ ಹಾಗೂ ನಗರದ ಕರ್ನಾಟಕ ಸಂಘ ಮತ್ತು ಜಿಲ್ಲಾ ಕಸಾಪ ಸಹಯೋಗದಲ್ಲಿ ಈ ಕಾರ್ಯಕ್ರಮವು ಏರ್ಪಟ್ಟಿದೆ. ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ನಿರ್ದೇಶಕ ನಂದಾಪುರ ಶ್ರೀನಿವಾಸರಾವ್, ಸಾಹಿತಿ ವೀರ ಹನುಮಾನ್, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಹೊಸೂರ್ ಇದ್ದರು.