More

    ರಾಗಿ ಖರೀದಿಸದ್ದಕ್ಕೆ ಹೋರಾಟ, ಅಧಿಕಾರಿಗಳ ವಿರುದ್ಧ ಮುಗಿಬಿದ್ದ ರೈತರು, ್ರೂಟ್ ಆ್ಯಪ್‌ನಲ್ಲಿ ದೊಷದಿಂದ ಗೊಂದಲ

    ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಲ್ಲಿ ರೈತರಿಂದ ರಾಗಿ ಖರೀದಿಸಲು ದಿನಕ್ಕೊಂದು ರೀತಿ ಕಾನೂನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ವತಿಯಿಂದ ಸೋಮವಾರ ನಗರದ ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ರಾಗಿ ಖರೀದಿಗೆ ಮಿತಿ ಹೇರಿದೆ. ಹೀಗಾಗಿಯೇ ದಿನಕ್ಕೊಂದು ನಿಯಮ ಜಾರಿಗೆ ತರುವ ಮೂಲಕ ರೈತರಿಂದ ರಾಗಿ ಖರೀದಿಸುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ರೈತರಿಂದ ರಾಗಿ ಖರೀದಿ ಆರಂಭಿಸಬೇಕು. ಮಧ್ಯವರ್ತಿಗಳ ಲಾಬಿಗೆ ಮಣಿದು ಯಾವುದೇ ರೈತರ ರಾಗಿ ಖರೀದಿಯನ್ನು ನಿರಾಕರಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರೈತರ ಮನವಿ ಆಲಿಸಿದ ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕೃಷಿ ಇಲಾಖೆಯ ಫ್ರೂಟ್ ವೆಬ್‌ಸೈಟ್‌ನಲ್ಲಿ ಸೂಕ್ತ ಮಾಹಿತಿ ದಾಖಲಾಗದಿರುವುದರಿಂದ ರಾಗಿ ಖರೀದಿಯಲ್ಲಿ ತೊಂದರೆಯಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿಯೇ ಹೆಚ್ಚುವರಿಯಾಗಿ ಮೂರು ಕಂಪ್ಯೂಟರ್‌ಗಳನ್ನು ರಾಗಿ ಖರೀದಿ ಕೇಂದ್ರದಲ್ಲಿ ಹೊಸದಾಗಿ ಸ್ಥಾಪಿಸಲಾಗಿದೆ. ಇದಲ್ಲದೆ ಮಂಗಳವಾರದಿಂದ ದೊಡ್ಡಬೆಳವಂಗಲ ಹಾಗೂ ತೂಬಗೆರೆ ನಾಡ ಕಚೇರಿಯಲ್ಲಿ ರಾಗಿ ಬೆಳೆಗಾರ ರೈತರಿಂದ ಸೂಕ್ತ ಮಾಹಿತಿ ಪಡೆದು ಫ್ರೂಟ್ ವೆಬ್‌ಸೈಟ್‌ನಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.

    ತಾಲ್ಲೂಕಿನಲ್ಲಿ ಈವರೆಗೆ 3,042 ಜನ ರೈತರು ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 2,300 ಜನ ರೈತರು ಫ್ರೂಟ್‌ನಲ್ಲಿ ಸೂಕ್ತವಾಗಿ ಮಾಹಿತಿ ದಾಖಲಿಸಿಲ್ಲ. ಇಂತಹ ರೈತರಿಂದ ಬಂದಿರುವ 1,500 ತಕರಾರು ಅರ್ಜಿ ಸರಿಪಡಿಸಲಾಗಿದೆ ಎಂದರು.

    ಈ ಹಿಂದೆ ಸಣ್ಣ ಹಾಗೂ ದೊಡ್ಡ ಹಿಡುವಳಿದಾರ ರೈತರು ಎನ್ನುವ ವಿಂಗಡಣೆ ಮಾಡಲಾಗಿತ್ತು. ಸಣ್ಣ ಹಿಡುವಳಿದಾರರಿಂದ ಮಾತ್ರ ಎಕರೆಗೆ 15 ಕ್ವಿಂಟಾಲ್ ರಾಗಿ ಖರಿದಿಸಲಾಗುತಿತ್ತು. ಆದರೆ ಈಗ ಎಲ್ಲ ರೈತರಿಂದಲು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಸಲಾಗುತ್ತಿದೆ. ರಾಗಿ ಖರೀದಿಗೆ ರೈತರು ಹೆಸರು ನೋಂದಣಿ ಮಾಡಿಕೊಳ್ಳಲು ಫೆ.29ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
    ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ, ತಾಲ್ಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಕೆ.ಸುಲೋಚನಮ್ಮ ವೆಂಕಟರೆಡ್ಡಿ, ಮುತ್ತೇಗೌಡ, ಸತೀಶ್, ಶಿರವಾರ ರವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts