ರಬಕವಿ/ಬನಹಟ್ಟಿ: ತಾಲೂಕಾದ್ಯಂತ ಯಾವುದೇ ರೀತಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಗಳನ್ನು ನಡೆಸುವಂತಿಲ್ಲ ಎಂದು ತಹಸೀಲ್ದಾರ್ ಸಂಜಯ ಇಂಗಳೆ ಹೇಳಿದರು.
ನಗರಸಭೆ ಸಭಾಭವನದಲ್ಲಿ ಗುರುವಾರ ನಡೆದ ತಾಲೂಕಿನ ಎಲ್ಲ ಇಲಾಖೆ ಹಾಗೂ ಸಾರ್ವಜನಿಕರ ಸಭೆಗಳಲ್ಲಿ ಅವರು ಮಾತನಾಡಿದರು. ಕರೊನಾ 2ನೇ ಅಲೆ ತೀವ್ರಗತಿಯಲ್ಲಿದ್ದು, ಯಾವುದೇ ಕಾರಣಕ್ಕೂ ದೇವಸ್ಥಾನ ಹಾಗೂ ಪ್ರಾರ್ಥನಾ ಮಂದಿರ ತೆರೆಯುವಂತಿಲ್ಲ. ಒಂದು ವೇಳೆ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಪಿಐ ಜೆ. ಕರುಣೇಶಗೌಡ ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳು ಮಾತ್ರ ಕರ್ಫ್ಯೂ ದಿನವಾದ ಶನಿವಾರ ಹಾಗೂ ಭಾನುವಾರ ದೊರೆಯುತ್ತವೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು. ವಿನಾಕಾರಣ ಸಂಚಾರದಿಂದ ಸಮಸ್ಯೆ ಎದುರಿಸುವುದು ನಿಶ್ಚಿತ ಎಂದರು.
ಪೌರಾಯುಕ್ತ ಶ್ರೀನಿವಾಸ ಜಾಧವ ಮಾತನಾಡಿ, ಸಂತೆ ಹಾಗೂ ಜನಜಂಗುಳಿ ಪ್ರದೇಶವನ್ನು ನಿಷೇಧಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಮೈದಾನದಲ್ಲಿ ನಿಯಮಾವಳಿಯಂತೆ ಸಂತೆ ನಡೆಸಲಾಗುವುದು ಎಂದರು.
ಕರೊನಾ ನಿಯಂತ್ರಣ ಉಸ್ತುವಾರಿ ಡಿಡಿಪಿಯು ಶಶಿಧರ ಪೂಜಾರಿ ಮಾತನಾಡಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ನಿರ್ಲಕ್ಷೃದಿಂದ ಸಂಚರಿಸಬೇಡಿ. ಎಲ್ಲರೂ ಸರ್ಕಾರದ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದರು.
ನಗರಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿದರು. ಪ್ರಾರ್ಥನಾ ಮಂದಿರ, ದೇವಸ್ಥಾನ, ವ್ಯಾಪಾರಸ್ಥರು ಹಾಗೂ ಸಮುದಾಯ ಭವನಗಳ ಮಾಲೀಕರು ಸೇರಿ ಅನೇಕ ಸಮುದಾಯಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.