ಕಾರವಾರ: ಕುಮಾರಸ್ವಾಮಿ ಯಾರದ್ದೋ ಮಾತು ಕೇಳಿಕೊಂಡು ನನ್ನ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ. ಅವರ ನನ್ನ ಕ್ಷಮೆ ಕೇಳಬೇಕು ಇಲ್ಲದಿದ್ದಲ್ಲಿ ಅವರ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರಿನಲ್ಲಿ ಅರಣ್ಯ ಜಮೀನು ಒತ್ತುವರಿ ಮಾಡಿದ್ದೇನೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಳಿಯಾಳಕ್ಕೆ ಬಂದು ಆರೋಪಿಸಿದ್ದಾರೆ.
ಹಳಿಯಾಳದ ಜೆಡಿಎಸ್ ಅಭ್ಯರ್ಥಿ ಎಸ್.ಎಕ್.ಘೋಟ್ನೇಕರ್ ಅವರು ಹಾಗೇ ಹೇಳುವಂತೆ ಪ್ರೇರೇಪಿಸಿದ್ದಾರೆ.
ನಾನು ಒಂದು ಇಂಚು ಅರಣ್ಯ ಅಥವಾ ಕಂದಾಯ ಜಮೀನು ಒತ್ತುವರಿ ಮಾಡಿದ ಬಗ್ಗೆ ದಾಖಲೆ ಒದಗಿಸಿದರೆ ನಾನು ಅದನ್ನು ವಾಪಸ್ ನೀಡುತ್ತೇನೆ. ಕ್ಷೆಮೆ ಕೋರುತ್ತೇನೆ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿ ಅವರ ಬಗ್ಗೆ ನನಗೆ ಗೌರವ ಇದೆ. ಅವರ ತಂದೆ ಎಚ್.ಡಿ.ದೇವೆಗೌಡ ಅವರ ಬಗ್ಗೆಯೂ ಅಪಾರ ಗೌರವವಿದೆ. ದೇವೆಗೌಡರು ನನ್ನನ್ನೂ ಗೌರವ ಹಾಗೂ ಪ್ರೀತಿಯಿಂದ ಕಾಣುತ್ತಾರೆ.
ನಾನು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಕಳೆದ ೪೦ ವರ್ಷಗಳಿಂದ ರಾಜಕೀಯ ಜೀವನ ನಡೆಸಿಕೊಂಡು ಬಂದಿದ್ದೇನೆ. ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡುವುದಿಲ್ಲ.
ಟೀಕೆ ಮಾಡಬೇಕು ಆದರೆ, ದಾಖಲೆ ನೀಡಿ ಟೀಕೆ ಮಾಡಬೇಕು ಎಂದು ಕುಮಾರಸ್ವಾಮಿ ವಿರುದ್ಧ ದೇಶಪಾಂಡೆ ಕಿಡಿ ಕಾರಿದರು.
ಇದನ್ನೂ ಓದಿ: ಅಪಘಾತ : 11 ವರ್ಷದ ಬಾಲಕ ಸಾವು
ಅನಾಥವಾಗಿದೆ ಉತ್ತರ ಕನ್ನಡ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉತ್ತರ ಕನ್ನಡ ಅನಾಥವಾಗಿದೆ ಎಂದು ಆರ್ವಿಡಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡಿಸಿ, ಸಿಇಒ ಬಿಟ್ಟರೆ ಬೇರೆ ಹಲವು ಇಲಾಖೆಗಳಿಗೆ ಮುಖ್ಯಸ್ಥರೇ ಇಲ್ಲವಾಗಿದ್ದಾರೆ, ಅಭಿವೃದ್ಧಿಯ ಚಿಂತನೆ ಇಲ್ಲದೇ ಆಡಳಿತ ನಿಷ್ಟ್ರಿಯವಾಗಿದೆ ಎಂದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರಾವಳಿ ಉತ್ಸವ ಮಾಡಿದ್ದೆವು. ಗಾಳಿಪಟ ಉತ್ಸವ, ಸ್ಕೂಬಾ ಉತ್ಸವ, ಹಾರ್ನ್ಬಿಲ್ ಉತ್ಸವ ಹೀಗೆ ಪ್ರವಾಸೋದ್ಯಮ ಬೂಸ್ಟ್ ಮಾಡಲು ಹಲವು ಕ್ರಮ ವಹಿಸಿದೆವು. ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆವು, ಸಾಕಷ್ಟು ಆಶ್ರಯ ಮನೆ ಮಂಜೂರು ಮಾಡಿದೆವು. ಪ್ರವಾಸೋದ್ಯಮ ಅಭಿವೃದ್ಧಿಗೆ ಮೂಲ ಸೌಕರ್ಯ ಕಲ್ಪಿಸಿದೆವು. ಪ್ರವಾಸಿಗರ ರಕ್ಷಣೆಗೆ ಲೈಫ್ಗಾರ್ಡ್ಗಳನ್ನು ನೇಮಕ ಮಾಡಿದ್ದೆವು. ಆದರೆ, ಈ ಅವಧಿಯಲ್ಲಿ ಪ್ರವಾಸೋದ್ಯಮ ಮೂಲ ಸೌಕರ್ಯಕ್ಕೆ ಮಹತ್ವ ಕೊಟ್ಟಿಲ್ಲ. ಪ್ರತಿ ಗ್ರಾಪಂಗೆ 10 ಮನೆಗಳೂ ಮಂಜೂರಾಗಿಲ್ಲ. ಪ್ರವಾಸಿ ತಾಣಗಳಲ್ಲಿ ಲೈಫ್ಗಾರ್ಡ್ಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ಖರ್ಚು ಮಾಡಿ ಜಿಲ್ಲೆಗೆ ಬಂದು ಇಲ್ಲಿನ ಏರ್ಪೋರ್ಟ್, ಪ್ರವಾಸೋದ್ಯಮ ಮುಂತಾದ ವ್ಯವಸ್ಥೆಗಳ ಬಗ್ಗೆ ಮಾತನಾಡಬಹುದಿತ್ತು. ಆದರೆ, ಯಾವುದೇ ಮಾತನಾಡಿಲ್ಲ ಎಂದರು.
ರಾಜ್ಯದಲ್ಲಿ ಬಹುಮತದ ಸರ್ಕಾರ
ರಾಜ್ಯದಲ್ಲಿ ಬಿಜೆಪಿ ಆಡಳಿತ ವ್ಯವಸ್ಥೆಯಿಂದ ಜನ ಬೇಸತ್ತಿದ್ದಾರೆ. ಇದರಿಂದ ಬಿಜೆಪಿ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಜೆಡಿಎಸ್ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದೆ ಅದೂ ಕೂಡ 113 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬುದು ಕನಸು ಮಾತ್ರ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಕಾಂಗ್ರೆಸ್ ಸಂಪೂರ್ಣ ಬಹುತದಿಂದ ಗೆದ್ದು, ಸರ್ಕಾರ ರಚಿಸುವ ಅವಕಾಶವಿದೆ ಎಂದರು.
ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಜನರೂ ಅದನ್ನು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ ಎಂಬುದನ್ನೂ ಅರಿಯಬೇಕು ಎಂದರು. ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.