ವಿಜಯವಾಡ: ಶಾಲೆ ನಡೆಸುತ್ತಿದ್ದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ ಪ್ರೀತಿ ಪಾತ್ರದವರಿಗೆ ಗುಡ್ಬೈ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾರನ್ನು ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿ ಒಳಗಡೆ ಕುಳಿತು ಕಣ್ಣೀರಿಡುತ್ತಾ ತಮ್ಮ ಪ್ರೀತಿ ಪಾತ್ರದವರಿಗೆ ಕೊನೆಯ ಸಾಲುಗಳನ್ನು ಹೇಳುತ್ತಿರುವ ದೃಶ್ಯವಿದೆ. ಆರ್ಥಿಕ ಸಂಕಷ್ಟದಿಂದ ದಂಪತಿ ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಅಟ್ಮಕರ್ ಮಂಡಲದ ಕರಿವೇನಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಕಾರ್ನತಿ ಸುಬ್ರಮಣ್ಯಂ (33) ಮತ್ತು ಆತನ ಪತ್ನಿ ರೋಹಿಣಿ (27) ಎಂದು ಗುರುತಿಸಲಾಗಿದೆ. ದಂಪತಿ ಬಹಳ ಉತ್ಸಾಹದಿಂದಲೇ ಜೀವನ ನಡೆಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಕೋಯ್ಲಕುಂಟ್ಲದಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ತೆರೆದಿದ್ದರು. ಆದರೆ, ಕರೊನಾ ಕಾರಣದಿಂದಾಗಿ ಮಕ್ಕಳ ಪಾಲಕರು ಶಾಲಾ ಶುಲ್ಕವನ್ನು ಕಟ್ಟಲು ಆಗಲಿಲ್ಲ. ಇತ್ತ ಶಾಲೆ ಆರಂಭಿಸಲು ಮಾಡಿದ್ದ ಸಾಲದ ಬಡ್ಡಿ ಮತ್ತು ಇಎಂಐ ಕಟ್ಟುವುದೇ ದಂಪತಿಗೆ ಚಿಂತೆಯಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ದಂಪತಿ ಶಾಲೆಯ ಮೂಲಸೌಕರ್ಯ ಹೆಚ್ಚಿಸಲು ಸುಮಾರು 1.5 ರಿಂದ 2 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಇನ್ಸ್ಪೆಕ್ಟರ್ ನಾರಾಯಣ ರೆಡ್ಡಿ ದಂಪತಿ ಎಂಟು ವರ್ಷಗಳ ಹಿಂದೆ ಮದುವೆ ಆಗಿದ್ದರು. ಶಾಲೆಯನ್ನು ಸ್ಥಾಪಿಸಿ ಅದನ್ನು ನಿರ್ವಹಣೆ ಮಾಡಲು ಸುಮಾರು 1.5 ರಿಂದ 2 ಕೋಟಿ ರೂ. ಸಾಲ ಮಾಡಿದ್ದರು. ಆದರೆ, ಕರೊನಾದಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಸಾಲದ ಬಡ್ಡಿ ಹೆಚ್ಚಾಗಿ ಕೊನೆಗೆ ಸಾಲ ತೀರಿಸಲಾಗದೇ ದಂಪತಿ ಹೆದರಿದ್ದಾರೆ. ಆಗಸ್ಟ್ 16 ರಂದು ರೋಹಿಣಿ ತನ್ನ ಪತಿಯ ಜತೆಗೆ ತವರಿಗೆ ಹೋಗಿ ಅವರೊಂದಿಗೆ ಸ್ವಲ್ಪ ಸಮಯ ಕಳೆದು ಇಬ್ಬರು ಸಂಜೆ ಮನೆಗೆ ಮರಳಿದ್ದಾರೆ.
ದಂಪತಿ ಮಾರ್ಗ ಮಧ್ಯೆ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕೊನೆಯ ಸಂದೇಶದ ವಿಡಿಯೋ ರೆಕಾರ್ಡ್ ಮಾಡಿ ದಂಪತಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ್ದಾರೆ. ವಿಡಿಯೋ ನೋಡಿದ ಕುಟುಂಬಸ್ಥರು ಅವರನ್ನು ಹುಡುಕಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದಾದರೂ ಇಬ್ಬರು ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ನಿತ್ಯಾನಂದ ದಿಢೀರ್ ಪ್ರತ್ಯಕ್ಷ- ಶಾಕಿಂಗ್ ಹೇಳಿಕೆ ಕೊಟ್ಟು ಮಠಾಧಿಪತಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ ‘ಕೈಲಾಸವಾಸಿ’
ಒಲಿಂಪಿಯನ್ಗಳಿಗೆ ಪ್ರೋತ್ಸಾಹ, ಪ್ರಧಾನಿ ಮೋದಿಗೆ ಕಪಿಲ್ ದೇವ್ ಶ್ಲಾಘನೆ
ಅಭಿವೃದ್ಧಿ ಗುರಿ, ಜನಪ್ರೀತಿಯ ಗರಿ: ಜನರ ಭಾವನೆ ಅರಿಯುವ ಯತ್ನ