ಬ್ಯಾಂಕಾಕ್: ಜೈಲಿನಲ್ಲಿ ಕರೊನಾ ಸೋಂಕು ಹಬ್ಬುವ ಭೀತಿಯಲ್ಲಿ ಗಲಭೆ ಎಬ್ಬಿಸಿದ ನೂರಾರು ಕೈದಿಗಳು ಪರಾರಿಯಾಗಿದ್ದಾರೆ. ಥಾಯ್ಲೆಂಡ್ನ ಬುರಿರಾಂ ಜೈಲಿನಲ್ಲಿ ಈ ಘಟನೆ ಸಂಭವಿಸಿದೆ. ಪರಾರಿಯಾಗಿದ್ದ ಕೈದಿಗಳ ಪೈಕಿ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಥಾಯ್ಲೆಂಡ್ನ ನ್ಯಾಯಾಂಗ ಸಚಿವಾಲಯ ತಿಳಿಸಿದೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂದಾಜು 2 ಸಾವಿರಕ್ಕೂ ಹೆಚ್ಚು ಜನರನ್ನು ಬುರಿರಾಂ ಜೈಲಿನಲ್ಲಿ ಬಂದಿಯಾಗಿರಿಸಲಾಗಿತ್ತು. ಈ ಜೈಲಿನಲ್ಲಿದ್ದ ಕೆಲವು ಕೈದಿಗಳು ಜೈಲಿನಿಂದ ಪರಾರಿಯಾಗಲು ಸಂಚು ರೂಪಿಸುತ್ತಲೇ ಇದ್ದರೂ. ಆದರೆ ಅವೆಲ್ಲವೂ ವಿಲವಾಗಿತ್ತು.
ಭಾನುವಾರ ಬೆಳಗ್ಗೆ ಕರೊನಾ ವೈರಸ್ ಸೋಂಕು ತಗಲುವ ಭೀತಿಯಿಂದ ಕೆಲವು ಕೈದಿಗಳು ಗಲಾಟೆ ಆರಂಭಿಸಿದ್ದರು. ಕೊನೆಗೆ ಜೈಲಿನಲ್ಲಿ ಕೈಗೆ ಸಿಕ್ಕ ವಸ್ತುಗಳೆಲ್ಲವನ್ನೂ ಗುಡ್ಡೆ ಹಾಕಿ ಬೆಂಕಿ ಹಚ್ಚಿದರು. ನಂತರ ಜೈಲು ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಾ, ಜೈಲಿನ ಮುಖ್ಯದ್ವಾರವನ್ನು ಒಡೆದು ಪರಾರಿಯಾದರು ಎನ್ನಲಾಗಿದೆ.
ಪರಾರಿಯಾಗಿದ್ದವರಲ್ಲಿ ಏಳು ಕೈದಿಗಳು ಸಿಕ್ಕಿಬಿದ್ದಿದ್ದಾರೆ. ಜೈಲಿನಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸೋಂಕಿನ ಭೀತಿಗೆ ಒಳಗಾಗಿದ್ದವರಿಗೆ ಮಾನಸಿಕಚಿಕಿತ್ಸಾ ತಜ್ಞರ ನೆರವು ಕೊಡಿಸಲಾಗಿದೆ ಎಂದು ನ್ಯಾಯಾಂಗ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.