ಬೆಲ್ಜಿಯಂ: ಭಾರತ-ಯುರೋಪಿಯನ್ ಒಕ್ಕೂಟದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಸೆಲ್ಸ್ಗೆ ತೆರಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣ ರದ್ದುಗೊಂಡಿದೆ.
ಕೊರೊನಾ ವೈರಸ್ ಆತಂಕ ಎಲ್ಲೆಡೆ ಮನೆ ಮಾಡಿದೆ. ಪಸರಿಸುತ್ತಿರುವ ವೇಗವೂ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ಬ್ರಸೆಲ್ಸ್ಗೆ ತೆರಳುತ್ತಿಲ್ಲ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ವಿದೇಶಿ ಪ್ರಯಾಣ ಸರಿಯಲ್ಲ ಎಂದು ಎರಡೂ ರಾಷ್ಟ್ರಗಳ ಆರೋಗ್ಯ ಇಲಾಖೆಗಳು ಸಲಹೆ ನೀಡಿವೆ. ಹಾಗಾಗಿ ಸದ್ಯ ಶೃಂಗಸಭೆ ನಡೆಸಲಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೂ ಬ್ರಸೆಲ್ಸ್ಗೆ ತೆರಳುವುದಿಲ್ಲ. ಬರುವ ದಿನಗಳಲ್ಲಿ ಪರಸ್ಪರ ಅನುಕೂಲಕರ ದಿನವನ್ನು ನೋಡಿಕೊಂಡು ಶೃಂಗಸಭೆಯನ್ನು ನಿಗದಿ ಮಾಡಲಾಗುವುದು ಎಂದು ಎಂಇಎಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಈ ವರ್ಷದ ಭಾರತ-ಯುರೋಪಿಯನ್ ಒಕ್ಕೂಟದ ಶೃಂಗಸಭೆ ಮಾರ್ಚ್ 13ರಂದು ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ನಡೆಯಬೇಕಿತ್ತು. ಬ್ರಸೆಲ್ಸ್ನಲ್ಲಿ ಇರುವ ಯುರೋಪಿಯನ್ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಯುರೋಪಿಯನ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)