ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಮೊಬಿಲಿಟಿ ರ್ಯಾಲಿಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಈ ರ್ಯಾಲಿಯ ಮೂಲಕ ಹಸಿರು ಇಂಧನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಉದ್ಧೇಶಿಸಲಾಗುತ್ತಿದೆ. ಹೀಗಾಗಿ ಗ್ರೀನ್ ಮೊಬಿಲಿಟಿ ರ್ಯಾಲಿಯಲ್ಲಿ ಹಸಿರು ಇಂಧನ ಬಳಸಿಕೊಂಡು ಸಂಚರಿಸುವ ವಾಹನಗಳು ಭಾಗವಹಿಸುತ್ತಿವೆ.
ರ್ಯಾಲಿಯು 42 ಕಿ.ಮೀ ಸಂಚರಿಸಲಿದ್ದು, ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭವಾಗಿ ಮಾದಾವರ ನೀಲಕಂಠ ಪಾರ್ಕಿಂಗ್ ಮೈದಾನದಲ್ಲಿ ಮುಕ್ತಾಯವಾಗಲಿದೆ.
Karnataka | Prime Minister Narendra Modi flags off Green Mobility Rally, in Bengaluru. He inaugurated the India Energy Week 2023 in the city today. pic.twitter.com/6vJRPR9swh
— ANI (@ANI) February 6, 2023
ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಭಾರತ ಇಂಧನ ಸಪ್ತಾಹ’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಖಾಸಗಿ ಸಹಭಾಗಿತ್ವ, ಹೂಡಿಕೆದಾರರಿಗೆ ಭಾರತ ಹೇಳಿ ಮಾಡಿಸಿದ ನೆಲೆಯಾಗಿದ್ದು, ಇಂಧನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳುವ ಮೂಲಕ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಿದರು.
ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಸೇರಿ ಹಸಿರು ಇಂಧನ ವಲಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಭಾರತವು ವಿಶ್ವದ ಇಂಧನ ಪರಿವರ್ತನೆಯ ಕೇಂದ್ರವಾಗುತ್ತಿದ್ದು, ಹೂಡಿಕೆದಾರರಿಗೆ ಉತ್ತಮ ಅವಕಾಶಗಳಿವೆ. ಸ್ಥಿರ ಸರ್ಕಾರ, ನಿರ್ಣಾಯಕ ನೀತಿಗಳು ಹಾಗೂ ದೇಶದ ಬಳಕೆ ಸಾಮರ್ಥ್ಯ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಮೋದಿ ಖಾತರಿ ನೀಡಿದರು .
ಇದೇ ಸಂದರ್ಭದಲ್ಲಿ ಏಕಬಳಕೆ ಪೆಟ್ ಬಾಟಲ್ ಮರು ಬಳಸಿ ತಯಾರಿಸಿದ ಜಾಕೆಟ್, ಸೋಲಾರ್ ಕುಕ್ ಟಾಪ್ ಬಿಡುಗಡೆ ಮಾಡಿದ ಅವರು, ಹಸಿರು ಇಂಧನ ಮೂಲದಿಂದ ಚಾಲಿತ ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು.