ಪಾವಗಡ: ಪರಿಶಿಷ್ಟ ಪಂಗಡಗಳಿಗೆ(ಎಸ್ಟಿ) ಶೇ.7.5ರಷ್ಟು ಮೀಸಲಾತಿ ಹೆಚ್ಚಿಸದಿದ್ದರೇ ಸಮುದಾಯದ 17 ಶಾಸಕರು, ಇಬ್ಬರು ಸಂಸದರು ಸಾಮೂಹಿಕ ರಾಜಿನಾಮೆಗೆ ಸಿದ್ಧರಾಗಿದ್ದಾರೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.
ಮಹರ್ಷಿ ವಾಲ್ಮೀಕಿ ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮುದಾಯಕ್ಕಿಂತ ಯಾವುದೇ ರಾಜಕೀಯ ಪಕ್ಷ ಮುಖ್ಯವಲ್ಲ. ಸಮುದಾಯಕ್ಕೆ ಸಿಗಬೇಕಾದ ಶೇ.7.5 ಮೀಸಲಾತಿ ಹಾಗೂ ವಾಲ್ಮೀಕಿ ಹೆಸರಿನಲ್ಲಿ ಪ್ರತ್ಯೇಕವಾದ ಸಚಿವಾಲಯ ರಚಿಸಬೇಕು ಎಂದು ಒತ್ತಾಯಿಸಿದರು.
ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿಮಾಣಕ್ಕೆ ಬದ್ಧ ಎಂದು ಹೇಳಿ ಮತ ಪಡೆದು ಆಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಸಮುದಾಯವನ್ನು ಕಡೆಗಣಿಸಿವೆ, ರಾಮರಾಜ್ಯದ ಪರಿಕಲ್ಪನೆಯನ್ನು ರಾಮಾಯಣದಲ್ಲಿ ತೋರಿಸಿದ್ದೆ ಮಹರ್ಷಿ ವಾಲ್ಮೀಕಿ. ರಾಮಾಯಣದ ಸಂದೇಶ ವಿಶ್ವಕ್ಕೆ ಸಾರಿದ ವಾಲ್ಮೀಕಿ ಬೃಹತ್ ಪುತ್ಥಳಿಯನ್ನು ರಾಮನ ಜತೆಗೆ ಆಯೋಧ್ಯೆಯಲ್ಲಿ ನಿಮಾಣ ಮಾಡಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಶಿವಪ್ಪ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಾರಪ್ಪ, ತಾಪಂ ಮಾಜಿ ಸದಸ್ಯರಾದ ಮಾರಪ್ಪ, ದಿವಾಕರಪ್ಪ, ಡಿಸಿಸಿ ಬ್ಯಾಂಕ್ ಸೀನಪ್ಪ, ಮದಕರಿ ನಾಯಕ ಸೇನೆ ಅಧ್ಯಕ್ಷ ಡಾ.ಓಂಕಾರ್ ನಾಯಕ, ನೌಕರರ ಸಂಘದ ಅಧ್ಯಕ್ಷ ಅನಿಲ್ಕುಮಾರ್, ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪಾಳ್ಳೆಗಾರ್ ಇತರರಿದ್ದರು.
ಫೆ.8ರಿಂದ ಜಾತ್ರೆ: ಫೆ.8 ಮತ್ತು 9 ರಂದು ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತೆ ನಡೆಯಲಿದ್ದು, ರಾಜ್ಯದ 224 ತಾಲೂಕುಗಳಲ್ಲಿ ಮೂರು ಹಂತದಲ್ಲಿ ಪ್ರವಾಸ ಮಾಡಲಾಗುತ್ತಿದೆ ಎಂದು ತಿಳಿಸಿದರು. ವಾಲ್ಮೀಕಿ ಜಾತ್ರೆಯ ತಾಲೂಕು ಅಧ್ಯಕ್ಷರಾಗಿ ಚಿತ್ತಗಾನಹಳ್ಳಿ ಚಂದ್ರು ಅವರನ್ನು ಆಯ್ಕೆ ಮಾಡಲಾಯಿತು.