ನವದೆಹಲಿ: ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆಯೇ ಇರುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪರ್ಯಾಯ ಇಂಧನಗಳತ್ತ ಮುಖ ಮಾಡಿರುವ ಭಾರತ ಬರುವ ವರ್ಷಗಳಲ್ಲಿ ಪೆಟ್ರೋಲ್ ಬಳಕೆಯ ಅನಿವಾರ್ಯತೆ ಇರುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಅನಿವಾರ್ಯತೆ ಇರುವುದಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಡಾ.ಪಂಜಾಬ್ರಾವ್ ದೇಶಮುಖ್ ಕೃಷಿ ವಿದ್ಯಾಪೀಠದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿರುವ ಅವರು, ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಜೈವಿಕ ಎಥೆನಾಲ್ ಅನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ. ಹಸಿರು ಹೈಡ್ರೋಜನ್ (ಹಸಿರು ಜಲಜನಕ) ತಯಾರಿಸಬಹುದು ಮತ್ತು ಇದನ್ನೂ ಕೆಜಿಗೆ 70 ರೂ.ಗೆ ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ.
ಮುಂದಿನ ಐದು ವರ್ಷದಲ್ಲಿ ಪೆಟ್ರೋಲ್ ಖಾಲಿಯಾಗಬಹುದು, ಇದರಿಂದಾಗಿ ಪಳೆಯುಳಿಕೆ ಇಂಧನವನ್ನು ನಿಷೇಧಿಸಲಾಗುವುದು ಎಂದು ಭವಿಷ್ಯ ನುಡಿದಿದ್ದಾರೆ. (ಏಜೆನ್ಸೀಸ್)