ಬೆಂಗಳೂರು: ಮಧ್ವಾಚಾರ್ಯರ ತತ್ವಗಳನ್ನು ದೇಶದೆಲ್ಲೆಡೆ ಸಾರಿ ಉತ್ತಮ ಜೀವನದ ಮಾರ್ಗದರ್ಶನ ಮಾಡುತ್ತಿದ್ದ ವಿಶ್ವೇಶತೀರ್ಥರು ಸಮಾಜೋದ್ಧಾರಕ್ಕಾಗಿ ಜೀವನವನ್ನು ಸವೆಸಿದ್ದಾರೆ ಎಂದು ಉಡುಪಿ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ದ್ವೈತ ವೇದಾಂತ ಅಧ್ಯಯನ ಸಂಶೋಧನಾ ಪ್ರತಿಷ್ಠಾನ ಹಾಗೂ ವಿದ್ಯಾಧೀಶ ಸ್ನಾತ ಕೋತ್ತರ ಸಂಸ್ಕೃತ ಶೋಧ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉತ್ತರಾದಿ ಮಠದಲ್ಲಿ ನಡೆದ ಗುರುವಂದನ ಮತ್ತು ಶ್ರೀ ವಿಶ್ವೇಶತೀರ್ಥರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರನ್ನು ತೊಡಗಿಸಿಕೊಂಡು ತತ್ವ ಬೋಧನೆಗಳನ್ನು ಮಾಡುತ್ತಿದ್ದ ಗುರುಗಳು ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಸಾಧ್ಯ ವಾಗುತ್ತಿಲ್ಲ. ಅವರು ಮಾಡಿದ ಸಮಾಜೋದ್ಧಾರದ ಕೆಲಸ ಮುಂದುವರಿಸಿಕೊಂಡು ಹೋಗುವುದರಲ್ಲೇ ನಮ್ಮ ಸಾರ್ಥಕತೆ ಇದೆ ಎಂದರು.
ಸಮಯಕ್ಕೆ ಹೆಚ್ಚು ಮಾನ್ಯತೆ ನೀಡುತ್ತಿದ್ದ ಗುರುಗಳು ಭಕ್ತರ ಸೇವೆ ಈಡೇರಿಸುವ ಜತೆಗೆ ಶಿಷ್ಯಂದಿರಿಗೆ ಜ್ಞಾನದ ಹಂಚಿಕೆ ಮಾಡುತ್ತಿದ್ದರು. ಪಾಠ ಹಿಂದುಳಿಯಬಾರದೆಂಬ ಕಾಳಜಿಯಿಂದ ಮೆರವಣಿಗೆ ನಡೆಯುತ್ತಿರುವಾಗಲೇ ಶಿಷ್ಯರಿಗೆ ತರ್ಕಪಾಠ ಹೇಳಿಕೊಟ್ಟಿದ್ದಾರೆ. ಭಗವಂತ ಎಲ್ಲೆಡೆ ಇದ್ದಾನೆ, ಎಲ್ಲರೊಳಗಿದ್ದಾನೆ. ನಿತ್ಯ ಪೂಜೆ ಮಾಡಲಾಗದವರು ತಮ್ಮ ಕಾಯಕವನ್ನು ನಿಷ್ಠೆಯಿಂದ ಪಾಲಿಸಿದರೆ ಅದಕ್ಕಿಂತ ಶ್ರೇಷ್ಠ ಪೂಜೆ ಮತ್ತೊಂದಿಲ್ಲ ಎಂಬ ಸಂದೇಶ ಸಾರಿದ್ದಾರೆ ಎಂದರು.
ಉತ್ತರಾದಿ ಮಠದೊಂದಿಗೆ ಬಾಂಧವ್ಯ: ಶ್ರೀ ವಿಶ್ವೇಶ ತೀರ್ಥರು ಉಡುಪಿ ಅಷ್ಟ ಮಠಗಳು, ದೇಶದ ಎಲ್ಲ ಮಠಗಳು ಮತ್ತು ಧಾರ್ವಿುಕ ಕೇಂದ್ರ ಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಉತ್ತರಾದಿ ಮಠದೊಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು.
ಉತ್ತರಾದಿ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀ ವಿಶ್ವೇಶತೀರ್ಥರ ಪುಣ್ಯಸ್ಮರಣೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥರು, ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು, ಶ್ರೀ ಸುವಿದ್ಯೇಂದ್ರ ತೀರ್ಥರು ಪಾಲ್ಗೊಂಡಿದ್ದರು.