ಕೊಪ್ಪ: ಜನಸಾಮಾನ್ಯರ ಧ್ವನಿಯಾಗಿರುವ ಕಾಂಗ್ರೆಸ್ನ್ನು ಬಿಜೆಪಿ ಸರ್ಕಾರ ದಬ್ಬಾಳಿಕೆ ಮೂಲಕ ನಿಯಂತ್ರಿಸಲು ಮುಂದಾಗಿದೆ ಎಂದು ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಇನ್ನಷ್ಟು ಬಲ ಪಡಿಸಲು ಕಾರ್ಯಕರ್ತರು ಒಗ್ಗೂಡಿ ದುಡಿಯಬೇಕು ಎಂದರು.
ಕರೊನಾ ಉಪಕರಣಗಳ ಖರೀದಿಯ ಸರಿಯಾದ ಅಂಕಿ ಅಂಶ ಬಿಡುಗಡೆಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರೆ ನೋಟಿಸ್ ನೀಡಿ ಕಾಂಗ್ರೆಸ್ ಮುಖಂಡರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ಬಡವರಿಗೆ ಭೂಮಿ ದೊರೆಯಲು ಕಾನೂನು ರೂಪಿಸಿದರೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿ ಭೂ ಉಳ್ಳವರಿಗೆ ಭೂಮಿ ದೊರಕಿಸಿಕೊಡಲು ಮುಂದಾಗಿದೆ. ಕಳೆದ ವರ್ಷ ನೆರೆ ಸಂತ್ರಸ್ತರಿಗೆ ಈವರೆಗೂ ಸೂರು ಕಲ್ಪಿಸಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲು ಸರ್ಕಾರ ಮುಂದಾಗಿದೆ ಎಂದು ದೂರಿದರು.