ಚಿಕ್ಕಮಗಳೂರು: ಆಹಾರದ ಕೊರತೆ, ನೈಸರ್ಗಿಕ ವಿಪತ್ತು ಮತ್ತು ಸಾಂಕ್ರಾಮಿಕ ರೋಗಗಳು ಹರಡಿದ ಸಂದರ್ಭ ಜನರಿಗೆ ಅಗತ್ಯ ನೆರವನ್ನು ರೆಡ್ಕ್ರಾಸ್ ಸಂಸ್ಥೆ ನೀಡುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಪ್ಪ ಹೇಳಿದರು.
ನಗರದ ಗೌರಿಕಾಲುವೆ ಸಮೀಪ ವಿಶ್ವ ರೆಡ್ಕ್ರಾಸ್ ಜನ್ಮ ದಿನಾಚರಣೆ ಅಂಗವಾಗಿ ಬುಧವಾರ ಅಂಗವಿಕಲ ಮಕ್ಕಳ ಆಶಾದೀಪಾ ಕೇಂದ್ರಕ್ಕೆ ಆರ್ಥಿಕ ಸಹಾಯಧನ ಹಾಗೂ ಹಣ್ಣು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೆಡ್ಕ್ರಾಸ್ ಸಂಸ್ಥೆ ಅಗತ್ಯವಿರುವ ಸಮುದಾಯಗಳ ಯೋಗಕ್ಷೇಮ ಸುಧಾರಿಸುವ ಗುರಿ ಹೊಂದಿದೆ. ಸರ್ಕಾರ ಅಂಗವಿಕಲ ಮಕ್ಕಳಿಗೆ ಉಚಿತವಾಗಿ ಲ್ಯಾಪ್ಟಾಪ್, ಸ್ಕೂಟಿ ಸೇರಿದಂತೆ ಹಲವು ಸೌಲಭ್ಯ ಒದಗಿಸಿ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತಿದೆ. ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮಕ್ಕಳನ್ನು ಅತ್ಯಂತ ಜಾಗರೂಕವಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್ ಗೌಡ ಮಾತನಾಡಿ, ರೆಡ್ಕ್ರಾಸ್ ದಿನವನ್ನು ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತಿದೆ. ಅವರು ರೆಡ್ಕ್ರಾಸ್ ಸ್ಥಾಪಕರು. ಅವರ ಜನ್ಮದಿನದ ಅಂಗವಾಗಿ ಆಶಾದೀಪಾ ಕೇಂದ್ರಕ್ಕೆ ಸಂಸ್ಥೆಯಿಂದ 10 ಸಾವಿರ ರೂ. ಮೊತ್ತದ ಚೆಕ್ ವಿತರಿಸಲಾಗುತ್ತಿದೆ ಎಂದರು.
ನಗರಸಭೆ ಮಾಜಿ ಸದಸ್ಯ ರೂಬೆನ್ ಮೋಸಸ್ ಮಾತನಾಡಿ, ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಸರ್ಕಾರ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ರೆಡ್ಕ್ರಾಸ್ ಸಂಸ್ಥೆ ಉಪಾಧ್ಯಕ್ಷ ಪವನ್, ಕಾರ್ಯದರ್ಶಿ ರಸೂಲ್ ಖಾನ್, ಖಜಾಂಚಿ ಲಿಖಿತ್, ಆರೋಗ್ಯ ಸಮಿತಿ ಅಧ್ಯಕ್ಷ ಡಾ. ಕೆ.ಸುಂದರ ಗೌಡ, ಯೂತ್ ರೆಡ್ಕ್ರಾಸ್ ಅಧ್ಯಕ್ಷ ನಂಜೇಶ್ ಬೆಣ್ಣೂರು, ನಿರ್ದೇಶಕರಾದ ವಿಲೀಯಂ ಪಿರೇರಾ, ವಿನಾಯಕ ಹಾಗೂ ಆಶಾದೀಪಾ ಸಿಬ್ಬಂದಿ ಇದ್ದರು.