ಪರಶುರಾಮಪುರ: ಸರ್ಕಾರದ ಆದೇಶದಂತೆ ಸೋಮವಾರ ಮುಸ್ಲಿಮರು ಮನೆಯಲ್ಲೇ ರಂಜಾನ್ ಹಬ್ಬ ಆಚರಿಸಬೇಕು ಎಂದು ಗ್ರಾಮದ ಪೊಲೀಸ್ ಠಾಣೆಯ ಪಿಎಸ್ಐ ಮಹೇಶ್ ಹೊಸಪೇಟೆ ತಿಳಿಸಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶನಿವಾರ ಗ್ರಾಮದ ಆರಕ್ಷಕ ಠಾಣೆ, ಗ್ರಾಮಾಡಳಿತ ಆಯೋಜಿಸಿದ್ದ ರಂಜಾನ್ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದರು.
ಮುಸ್ಲಿಮರು ರಂಜಾನ್ ಹಬ್ಬವನ್ನು ಅತ್ಯಂತ ಜಾಗರೂಕತೆಯಿಂದ ಆಚರಿಸಬೇಕು. ಗ್ರಾಮದ ಕ್ಷೌರದಂಗಡಿ ಮಾಲೀಕರು ಮಾಸ್ಕ್, ಸ್ಯಾನಿಟೈಜರ್ಸ್, ಕೈಗಳಿಗೆ ಗ್ಲೌಸ್ ಧರಿಸಿಕೊಂಡೇ ಕೆಲಸ ಮಾಡಬೇಕು. ಹೋಟೆಲ್ನಲ್ಲಿ ಗ್ರಾಹಕರಿಗೆ ಪಾರ್ಸಲ್ ಮಾತ್ರ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್ ಮಾತನಾಡಿ, ಹೋಬಳಿಯ ವಿವಿಧೆಡೆಗಳಲ್ಲಿ ಈವರೆಗೂ ಹಿಂದು- ಮುಸ್ಲಿಮರು ಸಾಮರಸ್ಯದಿಂದ ಹಬ್ಬ ಹರಿದಿನ ಆಚರಿಸಿಕೊಂಡು ಬಂದಿದ್ದಾರೆ. ಈಗ ಕರೊನಾ ಹಿನ್ನೆಲೆಯಲ್ಲಿ ಮನೆಗಳಲ್ಲೇ ಧಾರ್ಮಿಕ ಕಾರ್ಯ ಕೈಗೊಂಡು ಕಾನೂನು, ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಇಬ್ರಾಹಿಂ ಖಲೀವುಲ್ಲಾ, ಎಎಸ್ಐ ನಜೀರುಲ್ಲಾ, ಪೇದೆಗಳಾದ ಕೃಷ್ಣ, ಶ್ರೀನಿವಾಸ್, ಮಹಾಂತೇಶ್, ಮಂಜುನಾಥ, ಮುಸ್ಲಿಂ ಮುಖಂಡರಾದ ಮಹಮದ್ ಗೌಸ್, ಅಲ್ಲಾಭಕ್ಷ, ರಹಮತ್, ನಜೀರ್ಸಾಬ್, ಫಕ್ರುದ್ದೀನ್ ಮತ್ತಿತರರಿದ್ದರು.