ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಿಕ್ಕನೇರಳೆ (ಸಂತೆಮಾಳ) ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶಿವರಾತ್ರಿ ಹಬ್ಬದ ಅಂಗವಾಗಿ ಎರಡನೇ ವರ್ಷದ ಶ್ರೀ ಶನೈಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಚಿಕ್ಕನೇರಳೆ(ಸಂತೆಮಾಳ) ಗ್ರಾಮದಲ್ಲಿ ಇರುವ ಶ್ರೀ ಏಳನೇ ಶನೈಶ್ವರ ಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ದೇವಸ್ಥಾನ ವತಿಯಿಂದ ಶನಿದೇವರ ಜಯಂತಿ ಅಂಗವಾಗಿ ಎರಡನೇ ವರ್ಷದ ಪಲ್ಲಕ್ಕಿ ಉತ್ಸವವನ್ನು ಆಯೋಜಿಸಲಾಗಿತ್ತು. ಶ್ರೀ ಶನಿದೇವರ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಗಳಿಗೆ ಗ್ರಾಮದ ಹೊರ ಭಾಗದಲ್ಲಿರುವ ಕೆರೆಯ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪಲ್ಲಕ್ಕಿಯ ಮೇಲೆ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು. ಬಳಿಕ ದೇವಸ್ಥಾನ ಆವರಣದಲ್ಲಿ ಸೇವಾರ್ಥ ಸಲ್ಲಿಸುವ ಭಕ್ತರು ಹಾಗೂ ದೇವರ ಮೂರ್ತಿಗಳನ್ನು ಹೊತ್ತಂತಹ ಭಕ್ತರು ಕೊಂಡ ಹಾಯ್ದರು.
ಕೊಂಡಪೂಜೆಯಲ್ಲಿ ಹರಕೆ ಮಾಡಿಕೊಂಡಂತಹ ಭಕ್ತರು ಕೊಂಡ ಹಾಯ್ದ ಬಳಿಕ, ದೇವಸ್ಥಾನ ಆವರಣದಲ್ಲಿ ಸ್ವಾಮಿಗೆ ವಿಶೇಷ ಕಜ್ಜಾಯ ಪೂಜೆ ಸಲ್ಲಿಸಿದರು. ಪೂಜಾ ಕೈಂಕರ್ಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಶಿವರಾತ್ರಿ ಜಾಗರಣೆ ಅಂಗವಾಗಿ ಭಕ್ತಿಗೀತೆ ಕಾರ್ಯಕ್ರಮ ಜರುಗಿತು.