ವಿಜಯಪುರ: ಕಲಿಕೆಯಿಂದ ದೂರವುಳಿದ ವಿದ್ಯಾಸಕ್ತರಿಗಾಗಿ ಸ್ಥಾಪಿಸಲಾದ ಮುಕ್ತ ವಿವಿಗಳು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಸುರೇಶ ಡಬ್ಬಿ ಹೇಳಿದರು.
ನಗರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಕ್ತ ವಿಶ್ವ ವಿದ್ಯಾಲಯಗಳ ಮೂಲಕ ಪದವಿ ಪಡೆದ ಅನೇಕರು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಅನೇಕರ ಬದುಕಿಗೆ ಈ ವಿಶ್ವ ವಿದ್ಯಾಲಯ ನೆರಳಾಗಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾಸಕ್ತರಿಗೆ ಮನವಿ ಮಾಡಿದರು.
ಅಧ್ಯಯನ ಕೇಂದ್ರದ ಮುಖ್ಯಸ್ಥ ಶರಣು ಸಬರದ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಾಪಂಚಿಕ ಅಡಚಣೆಯಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆಯದೇ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಶೈಕ್ಷಣಿಕವಾಗಿ ಮುಂದುವರೆಯುವುದರ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಕರೆ ನೀಡಿದರು.
ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮೈತ್ರಿ ಡಿ.ಎಸ್, ಪ್ರಚಾರ ಸಮಿತಿ ಸದಸ್ಯ ಸಿದ್ದೇಗೌಡ, ಸಂತೋಷ ವಾಲಿಕಾರ, ದಯಾನಂದ ಗಾಯಕವಾಡ, ವಿಲಾಸ ಚವ್ಹಾಣ, ಕಲ್ಯಾಣಕುಮಾರ ರಾಠೋಡ, ಈರಣ್ಣ ಬಡಿಗೇರ, ಸುಧೀರ ಅಂಬಿಗೇರ, ಸಂತೋಷ ಮರಗೂರ, ವಿನಾಯಕ ಬಿರಾದಾರ, ಆಕಾಶ ಸಬರದ, ಬಂದೇನವಾಜ ನದಾಫ, ಉಮೇಶ ಚವ್ಹಾಣ ಮತ್ತಿತರರಿದ್ದರು.