More

    ಮೋದಿ ಮತ್ತೆ ಪ್ರಧಾನಿಯಾಗುವುದು ನಮ್ಮ ಮುಂದಿರುವ ಸವಾಲುಗಳಲ್ಲೊಂದು; ಸಚಿವ ಜೈಶಂಕರ್

    ಬೆಂಗಳೂರು: ವಿಶ್ವಬಂಧು ಪರಿಕಲ್ಪನೆಯಡಿ ನಾವು ಭಾರತದ ಬ್ರ್ಯಾಂಡ್‌ ಗೆ ಆದ್ಯತೆ ನೀಡಬೇಕಾಗಿದೆ. ಸಬ್‌ ಕಾ ಸಾತ್‌ – ಸಬ್‌ ಕಾ ವಿಕಾಸ್‌ ಜಾಗತಿಕವಾಗಿ ನಾವು ಅನುಷ್ಠಾನಗೊಳಿಸುತ್ತಿದ್ದೇವೆ. ಈ ಎಲ್ಲಾ ಪರಿಸ್ಥಿತಿಗಳ ನಡುವೆ ಮುಂದಿನ ಬಾರಿಯೂ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ಕೂಡ ನಮ್ಮ ಮುಂದಿರುವ ಸವಾಲುಗಳಲ್ಲಿ ಒಂದಾಗಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಮಂಗಳವಾರ ಹೇಳಿದರು. 

     ರಾಜಾಜಿನಗರದ ದಿ ಇನ್ಟ್ಯಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್‌ ಇಂಡಿಯಾ -ಐಸಿಎಸ್ಐ ಬೆಂಗಳೂರು ಚಾಪ್ಟರ್‌ ನಲ್ಲಿ ಆಯೋಜಿಸಿದ್ದ “ವಿಶ್ವಬಂಧು ಭಾರತ್” ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ವಿಶ್ವದ ಯಾವುದೇ ಸಂಘರ್ಷ, ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ತೈಲ ಬೆಲೆ, ಆಹಾರದರಗಳ ಏರಿಕೆ, ಹಣದುಬ್ಬರ ಹೆಚ್ಚಳ ಒಳಗೊಂಡಂತೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜಗತ್ತಿನ ಎಲ್ಲಾ ಸಂಘರ್ಷ, ಸಮಸ್ಯೆಗಳಿಗೆ “ವಿಶ್ವಬಂಧು” ಪರಿಕಲ್ಪನೆಯೇ ಪರಿಹಾರವಾಗಿದೆ ಎಂದು ಪ್ರತಿಪಾದಿಸಿದರು.

    ಇಸ್ರೇಲ್‌ – ಇರಾನ್‌ ಸಂಘರ್ಷ ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಸಂಘರ್ಷ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಸೂಚಿಸಿದ್ದಾರೆ. ಇರಾನ್‌ ನಲ್ಲಿ ಭಾರತದ ಹಡಗು ಸಿಲುಕಿಕೊಂಡಿದ್ದು, 17 ಭಾರತೀಯ ನಾಗರಿಕರು ಸಹ ಇದ್ದು, ಇವರನ್ನು ಸುರಕ್ಷಿತವಾಗಿ ಕರೆ ತರಲು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಸುಮಾರು 18 ದಶಲಕ್ಷ ಭಾರತೀಯರು ನೆಲೆಸಿದ್ದು, ಇವರ ಸುರಕ್ಷತೆಯೂ ಸಹ ನಮ್ಮ ಜವಾಬ್ದಾರಿಯಾಗಿದೆ ಎಂದರು.

    20 ದೇಶಗಳ ಬಿಕ್ಕಟ್ಟು

    ರಷ್ಯಾ ಉಕ್ರೇನ್‌ ಭಾಗದಲ್ಲಿ ಯುದ್ಧದ ಗಂಭೀರತೆ ಇದ್ದು, ಗಾಜಾದಲ್ಲಿ  ಸಂಘರ್ಷ ಮುಂದುವರೆದಿದೆ. ಭಾರತ ಫೆಸಿಫಿಕ್ ವಲಯದಲ್ಲಿ ಪರಿಸ್ಥಿತಿ ತ್ರಾಸದಾಯವಾಗಿದೆ. ಜಗತ್ತಿನ ಸುಮಾರು 20 ದೇಶಗಳು ಪರಸ್ಪರ ಮಾತುಕತೆ ನಡೆಸದ ಸ್ಥಿತಿಯಲ್ಲಿವೆ. ಇಂತಹ ಸವಾಲುಗಳನ್ನು ಎದುರಿಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದ್ದು, ಪರಸ್ಪರ ಅರ್ಥಮಾಡಿಕೊಳ್ಳುವ, ಮಾತುಕತೆ ನಡೆಸುವ ಮಾರ್ಗಗಳನ್ನು ಅನುಸರಣೆ ಮಾಡಬೇಕಾಗಿದೆ.

    ಏಕಮುಖವಾದ ಇತ್ಯರ್ಥದಿಂದ ಸಮಗ್ರ ಪರಿಹಾರ ದೊರೆಯುವುದಿಲ್ಲ. ವಿಶ್ವಸಂಸ್ಥೆಯೂ ಸಹ ಇಂತಹ ವಿಷಯಗಳಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ ಭಾರತ ಅಭಿವೃದ್ಧಿಶೀಲ ದೇಶಗಳಿಗೆ ಗ್ಲೋಬಲ್‌ ಸೌತ್‌ ಪರಿಕಲ್ಪನೆಗೆ ಒತ್ತು ನೀಡಿದ್ದು, ನಾವು ಈ ರಾಷ್ಟ್ರಗಳಿಗೆ ‍ಧ್ವನಿಯಾಗಿದ್ದೇವೆ. ಜಿ20 ಅಧ್ಯಕ್ಷತೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದೇವೆ ಎಂದು ಡಾ. ಎಸ್.‌ ಜೈಶಂಕರ್‌ ಹೇಳಿದರು.

    ತ್ವರಿತ ಸ್ಪಂದನೆ

    ಮೇಕ್‌ ಇನ್‌ ಇಂಡಿಯಾ ದೇಶದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ನಾವು ವಿಶ್ವಬಂಧು ಪರಿಕಲ್ಪನೆಯಡಿ ಜಗತ್ತಿಗಾಗಿ ಉತ್ಪಾದಿಸುತ್ತಿದ್ದೇವೆ. ಯಾವುದೇ ಜಗತ್ತಿನ ನೈಸರ್ಗಿಕ ವಿಪತ್ತುಗಳು, ಸಮಸ್ಯೆಗಳಿಗೆ ಭಾರತ ತಕ್ಷಣವೇ ಸನ್ನದ್ಧವಾಗುತ್ತಿದ್ದು, ಸೂಕ್ತ ರೀತಿಯಲ್ಲಿ ತ್ವರಿತವಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು.

    ವಿಕಸಿತ ಭಾರತ ನಮ್ಮ ಗುರಿಯಾಗಿದ್ದು, ಕೆಲವೇ ವರ್ಷಗಳಲ್ಲಿ ಭಾರತ ಐದು ಟ್ರಿಲಿಯನ್‌ ಆರ್ಥಿಕತೆ ದೇಶವಾಗಲಿದೆ. 2030ರ ವೇಳೆಗೆ 10 ಟ್ರಿಲಿಯನ್‌  ಗೆ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳಲಿದೆ. 2047 ರ ವೇಳೆಗೆ ವಿಕಸಿತ ಭಾರತ ನಮ್ಮ ಗುರಿ. ಈ ವೇಳೆಗೆ ಎಲ್ಲಾ ವಲಯದ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗಲಿದ್ದು, ಇದೇ ರೀತಿ ಕಂಪನಿ ಸೆಕ್ರೇಟರೀಸ್‌ ಗಳಿಗೂ ವಿಪುಲ ಅವಕಾಶಗಳು ದೊರೆಯಲಿದ್ದು, ದೇಶದ ಅಭಿವೃದ್ಧಿಯಲ್ಲಿ ಕಂಪೆನಿ ಸೆಕ್ರೇಟರೀಗಳ ಪಾತ್ರ ಅನನ್ಯ ಎಂದು ಹೇಳಿದರು.

    ಹಣಕಾಸು ಪರಿಸ್ಥಿತಿ ಬದಲಾವಣೆ

    ಕಳೆದ ಹತ್ತು ವರ್ಷಗಳ ಹಿಂದೆ ಆರ್ಥಿಕವಾಗಿ ಭಾರತ ಜಗತ್ತಿನಲ್ಲಿ 11 ನೇ ಸ್ಥಾನದಲ್ಲಿದ್ದು, ಇದೀಗ 5 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮುಂದಿನ ಹತ್ತು ವರ್ಷಗಳಲ್ಲಿ ಜಾಗತಿಕ ಹಣಕಾಸು ಪರಿಸ್ಥಿತಿಯ ಚಿತ್ರಣವೇ ಬದಲಾಗಲಿದೆ. ಎಲೆಕ್ಟ್ರಿಕ್‌ ವಾಹನಗಳು, ಚಿಪ್‌ ಗಳ ಉತ್ಪಾದನೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಇದು ಕೃತಕ ಬುದ್ದಿಮತ್ತೆ ಯುಗವಾಗಿದ್ದು, ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೈಸರ್ಗಿಕ ಬುದ್ದಿಮತ್ತೆ ಅಗತ್ಯವಾಗಿದೆ. ಅಂತಹ ಸಾಮರ್ಥ್ಯ ಕೂಡ ನಮ್ಮಲ್ಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಐಸಿಎಸ್ಐನ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ವೆಂಕಟ ಸುಬ್ಬಾರಾವ್ ಕಲ್ವಾ, ಕಾರ್ಯದರ್ಶಿ ವಿಶ್ವಾಸ್ ಹೆಗಡೆ,  ಎಸ್ಐಆರ್ ಸಿ ಅಧ್ಯಕ್ಷರಾದ ಪ್ರದೀಪ್ ಬಿ ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯರಾದ ಸಿ. ದ್ವಾರಕಾನಾಥ್, ಬೆಂಗಳೂರು ಚಾಪ್ಟರ್‌ ನ ಉಪಾಧ್ಯಕ್ಷರಾದ ದೇವಿಕಾ ಸತ್ಯನಾರಾಯಣ, ಕೇಂದ್ರೀಯ ಮಂಡಳಿ ಮಾಜಿ ಸದಸ್ಯ ಗೋಪಾಲಕೃಷ್ಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts