ಭುವನೇಶ್ವರ: ‘ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಅವರ ಸ್ವಾಬ್ ತೆಗೆದು ಕೋವಿಡ್-19 ಪರೀಕ್ಷೆ ಕಳುಹಿಸಲಾಗಿದೆ.. ಇನ್ನೂ ಟೆಸ್ಟ್ ವರದಿ ಬರದ್ದರಿಂದ ಶವ ಹಸ್ತಾಂತರ ಮಾಡಿಲ್ಲ.. ವಾರಸುದಾರರಿಗೆ ಶವ ಹಸ್ತಾಂತರಿಸಲು ಕರೊನಾ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ..’
– ಕರೊನಾ ಹಿನ್ನೆಲೆಯಲ್ಲಿ ಇಂಥ ಹಲವು ಸಂದಿಗ್ಧ ಎದುರಾಗುವುದು ಹೊಸದೇನಲ್ಲ. ಇದೀಗ ಇಂಥ ಸನ್ನಿವೇಶಗಳು ಸೃಷ್ಟಿ ಆಗದಿರಲೆಂದೇ ಸತ್ತ ಮೇಲೆ ಕರೊನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅಂದಹಾಗೆ, ಹೀಗೊಂದು ಆದೇಶ ಹೊರಡಿಸಿದ್ದು ಒಡಿಶಾ ಸರ್ಕಾರದ ಆರೋಗ್ಯ ಇಲಾಖೆ. ಆಸ್ಪತ್ರೆಯಲ್ಲಿ ನಾನಾ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಕೋವಿಡ್-19 ಟೆಸ್ಟ್ನಿಂದಾಗಿ ಶವ ಹಸ್ತಾಂತರ ವಿಳಂಬ ಇತ್ಯಾದಿ ಸಂಕಷ್ಟ ಉಂಟಾಗಿದ್ದು ವರದಿಯಾಗಿದೆ. ಆಸ್ಪತ್ರೆಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮೊದಲೇ ನೊಂದಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಶವ ಹಸ್ತಾಂತರ ವಿಳಂಬ ಆಗುವುದು ಮತ್ತಿತರ ಕಾರಣಗಳಿಂದ ಇನ್ನಷ್ಟು ನೋವು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಈ ಆದೇಶ ಮಾಡಿರುವುದಾಗಿ ಹೇಳಿಕೊಂಡಿದೆ. ಜತೆಗೆ ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 48 ಗಂಟೆಯೊಳಗೆ ಡೆತ್ ಸರ್ಟಿಫಿಕೇಟ್ ಕೊಡಬೇಕು ಎಂಬುದಾಗಿಯೂ ತಾಕೀತು ಮಾಡಿದೆ. (ಏಜೆನ್ಸೀಸ್)