ಬೆಂಗಳೂರು: ಯಾವುದೇ ಮದ್ಯದ ದರ ಏರಿಕೆ ಮಾಡಿಲ್ಲ. ಹೊಸ ವರ್ಷಕ್ಕೆ ಮಾರಾಟದಲ್ಲಿ ಗಣನೀಯ ಏರಿಕೆಯೇನೂ ಆಗಿಲ್ಲ, ಪ್ರತಿವರ್ಷದಂತೆ ಮಾರಾಟ ಆಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ಮೇಲಿನ ತೆರಿಗೆ ಏರಿಕೆ ಮಾಡಿಲ್ಲ. ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ನಾವಂತೂ ಏರಿಸಿಲ್ಲ. ಅವರ ಮಾಲು ಅವರ ದರ. ಮಾರ್ಕೆಟ್ ಮಾಡುವವರು ಮಾಡಿಕೊಳ್ಳಬಹುದು. ಸರ್ಕಾರಕ್ಕೆ ತೆರಿಗೆ ಮಾತ್ರ ಕಟ್ಟಬೇಕು ಅಷ್ಟೇ ಅಲ್ವೇ ಎಂದರು.
ತೆರಿಗೆ ಏರಿಕೆ ಮಾಡಿಲ್ಲ. ಹೇಗಿದೆಯೋ ಹಾಗೇ ಇದೆ. ನಮಗೆ ಮಾರಾಟದ ಯಾವುದೇ ಗುರಿ ಇಲ್ಲ. ಆದಾಯ ನಿರೀಕ್ಷೆ ಇದೆ. ಒಳ್ಳೆಯ ಮದ್ಯ ಕೊಡಲು ಪ್ರಯತ್ನ ಮಾಡುತ್ತೇವೆ. ಬಜೆಟ್ನಲ್ಲೂ ತೆರಿಗೆ ಏರಿಸುವ ಬಗ್ಗೆ ಇನ್ನೂ ಪ್ರಸ್ತಾಪ ಇಲ್ಲ ಎಂದು ಹೇಳಿದರು.
ಧರ್ಮ ಯಾರಪ್ಪನ ಆಸ್ತಿ ಆಗಬಾರದು:
ಧರ್ಮ, ದೇವರು ಯಾರಪ್ಪನ ಮನೆ ಆಸ್ತಿಯೂ ಆಗಬಾರದು. ಧರ್ಮ, ದೇವರು ನಮಗೆಲ್ಲರಿಗೂ ಇರಬೇಕೇ ವಿನಹಃ ನಂದೇ ಧರ್ಮ, ನಾನೇ ಸ್ಥಾಪನೆ ಮಾಡುತ್ತೇನೆ, ನಾನೇ ದೇವಸ್ಥಾನ ಕಟ್ಟಿಬಿಟ್ಟೆ ಎನ್ನುವ ಆಭಾಸತನದಿಂದ ದೇಶ ದಿವಾಳಿ ಆಗುತ್ತಿದೆ. ಇದು ಸರಿಯಲ್ಲ. ಧರ್ಮ ಎಲ್ಲರ ಧರ್ಮವಾಗಬೇಕು, ಎಲ್ಲರ ರಾಮ ಆಗಬೇಕು. ರಾಮನ ಗುಡಿ ಕಟ್ಟಿದರೆ ಸಾಲದು, ರಾಮ ರಾಜ್ಯ ಆಗಬೇಕು ಎಂದು ತಿಳಿಸಿದರು.
ಬಿಜೆಪಿಯವರಿಗೆ ರಾಮರಾಜ್ಯ ಗೊತ್ತಿಲ್ಲ:
ಹಿಂದೂ ಕಾರಸೇವಕರ ಬಂಧನದ ವಿಚಾರ ಕುರಿತ ಪ್ರಶ್ನೆಗೆ, ಅದು ಕಾನೂನಿನ ವಿಚಾರ. ಕಾನೂನಿನ ಎದುರು ಯಾರೂ ದೊಡ್ಡವರಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ವಿನಃ ಇವರು, ಅವರು ಎನ್ನುವುದು ಬರುವುದಿಲ್ಲ. ಕಾರಸೇವಕರು, ರಾಮನ ಭಕ್ತರು, ಅಲ್ಲಾನ ಭಕ್ತರೂ ಕಾನೂನು ಅಡಿ ಎಲ್ಲರೂ ಒಂದೇ. ಕಾನೂನು ಪ್ರಕಾರ ಕ್ರಮ ಆಗುತ್ತದೆ ಅಷ್ಟೆ. ಬಿಜೆಪಿಯವರೆಲ್ಲ ಧರ್ಮ, ದೇವರನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಲೇ ಬಂದಿದ್ದಾರೆ. ಇದನ್ನು ಬಿಟ್ಟು ಅವರು ಬೇರೇನೂ ಮಾಡುವುದಿಲ್ಲ, ಅವರು ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ?. ಬಿಜೆಪಿಯವರಿಗೆ ರಾಮ ಗೊತ್ತು ಅಷ್ಟೇ, ರಾಮರಾಜ್ಯ ಗೊತ್ತಿಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ ಟಾಂಗ್ ಕೊಟ್ಟರು.