ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಂಡಿರುವ ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಭಾನುವಾರದಂದು ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬೇರೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಾಗಲೀ ಅಥವಾ ರಾಜಕಾರಣಿಗಾಗಲೀ ಆಹ್ವಾನ ನೀಡಿಲ್ಲವೆಂದು ಪಕ್ಷ ಸ್ಪಷ್ಟಪಡಿಸಿದೆ.
ಎರಡನೆಯ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಅರವಿಂದ್ ಕೇಜ್ರಿವಾಲ್ ತಮ್ಮನ್ನು ದೆಹಲಿಯ ಮಗ ಎಂದು ಕರೆದುಕೊಂಡಿದ್ದಾರೆ. ಹಾಗಾಗಿ ಕೇಜ್ರಿವಾಲ್ ಮೇಲೆ ನಂಬಿಕೆ ಇಟ್ಟು ಮತ ನೀಡಿದ ದೆಹಲಿಯ ಸರ್ವ ಜನರಿಗೂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸ್ವಾಗತ ಕೋರುವುದಾಗಿ ಪಕ್ಷದ ವಕ್ತಾರ ಗೋಪಾಲ್ ರೈ ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಅವರು, “ಬೇರೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನಾಗಲೀ ಅಥವಾ ರಾಜಕಾರಣಿಗಳನ್ನಾಗಲೀ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ದೆಹಲಿಯ ಪ್ರತಿ ನಾಗರಿಕರಿಗೂ ಕಾರ್ಯಕ್ರಮಕ್ಕೆ ಬಂದು ಅವರ ಮಗ/ಸಹೋದರರಾಗಿರುವ ಕೇಜ್ರಿವಾಲ್ಗೆ ಹರಸಲು ಸ್ವಾಗತಿಸಲಾಗಿದೆ.” ಎಂದು ತಿಳಿಸಿದ್ದಾರೆ.
ಭಾನುವಾರದಂದು ದೆಹಲಿಯಲ್ಲಿರುವ ರಾಮ್ಲೀಲಾ ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟ ಪಟ್ಟಿಯಲ್ಲಿ ಬಹುತೇಕ ಹಳೆಯ ಸಚಿವರ ಹೆಸರೇ ಇರಲಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್)