ಹೊಸದುರ್ಗ: ಯುವ ನೃತ್ಯಗಾರ್ತಿಯರಾದ ಎಸ್.ಅಪೂರ್ವ, ಎಸ್.ಅರ್ಪಿತಾ ಅವರ ಭರತನಾಟ್ಯ ರಂಗ ಪ್ರವೇಶದ ಅಂಗವಾಗಿ ಪಟ್ಟಣದ ಶಿವಗಂಗಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ನೃತ್ಯ ನೀರಾಜನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಅವಳಿ ಸಹೋದರಿಯರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು.
ಬೆಲಗೂರಿನ ವಾಸವಿ ನೃತ್ಯ ಕಲಾಕ್ಷೇತ್ರದ ವಿದುಷಿ ದಿವ್ಯ ನವೀನ್ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ನೃತ್ಯ ನೀರಾಜನ ಕಾರ್ಯಕ್ರಮದಲ್ಲಿ ಹೊಸದುರ್ಗದ ಆರ್.ಶಿವಕುಮಾರ್, ಜಯಶ್ರೀ ದಂಪತಿ ಪುತ್ರಿಯರು ಎರಡೂವರೆ ತಾಸು ನಿರಂತರವಾಗಿ ಭರತನಾಟ್ಯದ ವಿವಿಧ ಪ್ರಕಾರಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಸಹೋದರಿಯರು ಕಾಲ್ಗಳಿಗೆ ಗೆಜ್ಜೆ ಕಟ್ಟುವ ಮೂಲಕ ಪಾರಂಪರಿಕವಾಗಿ ಭರತನಾಟ್ಯ ರಂಗ ಪ್ರವೇಶಕ್ಕೆ ಚಾಲನೆ ನೀಡಿದರು. ಮಧುರ ಕಂಠದ ಗಾಯಕಿ ಮೈಸೂರಿನ ವಿದುಷಿ ಸಿ.ಎಸ್.ಲಕ್ಷ್ಮಿ ಅವರ ಹಾಡುಗಳಿಗೆ ಕಲಾವಿದೆಯರು ಹೆಜ್ಜೆ ಹಾಕಿದರು.
ತ್ಯಾಗರಾಜರ ಶಂಭು ಮಹಾದೇವ ಕೃತಿಯಿಂದ ಆಯ್ದುಕೊಳ್ಳಲಾದ ಕಾಮವರ್ದಿನಿ ರಾಗ ರೂಪಕ, ತಾಳದ ಗಂಗಾವತರಣ ಸಂಚಾರಿ ಸನ್ನಿವೇಶದ ನೃತ್ಯ ರೂಪಕ ಜನರನ್ನು ಆಕರ್ಷಿಸಿತು. ಭಕ್ತ ಮಾರ್ಕಾಂಡೇಯನ ಸಂಚಾರಿ ಭಾಗದ ಸನ್ನಿವೇಶ ಕೂಡ ಮನೋಜ್ಞವಾಗಿ ಮೂಡಿಬಂತು. ಗಾಯಕರು ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಅಪೂರ್ವ ಮತ್ತು ಅರ್ಪಿತಾ ಭಾವಾನಭಿಯದ ನೃತ್ಯದ ಮೂಲಕ ಮನ ಸೆಳೆದರು.
ಹಿಮ್ಮೇಳನದಲ್ಲಿ ಸೊಗಸಾದ ಗಾಯನ, ಇಂಪಾದ ಕೊಳಲುವಾದನ, ಮಾರ್ದನಿಸಿದ ಮೃಂದಗವಾದನ ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಹಾಸನದ ವಿದ್ವಾನ್ ಮಂಜುನಾಥ್ ಅವರು ಮೃದಂಗ, ಎಚ್.ಎಂ ಕೌಸ್ತುಭ ಅವರು ರಿದಂ, ಮೈಸೂರಿನ ಸಮೃದ್ಧ ಶ್ರೀನಿವಾಸ್ ಅವರು ಕೊಳಲು ವಾದನ ನುಡಿಸಿದರು.