ಮುಧೋಳ: ದೆಹಲಿ ಹತ್ತಿರ ರೈತರ ಹೋರಾಟ ಹತ್ತಿಕ್ಕಲು ಅವರ ವಾಹನಗಳ ಚಕ್ರದ ಗಾಳಿ ತೆಗೆಸಿದ ‘ಮೋದಿ ಹವಾ’ ಅಂದೇ ಟುಸ್ ಆಗಿದೆ. ಈ ಚುನಾವಣೆಯಲ್ಲಿ ಯಾವುದೇ ಹವಾ ಇಲ್ಲ. ಬಾಗಲಕೋಟೆ ಕ್ಷೇತ್ರದಾದ್ಯಂತ ಕಾಂಗ್ರೆಸ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಸಂಯುಕ್ತ ಪಾಟೀಲ ಆಯ್ಕೆಯಾಗುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಹತ್ತು ವರ್ಷಗಳಿಂದ ಸುಳ್ಳು ಹೇಳುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಧೋರಣೆಯಿಂದ ಜನರಿಗೆ ಭಮನಿರಸವಾಗಿದೆ. ಪ್ರತಿಯೊಬ್ಬರಿಗೂ 15 ಲಕ್ಷ ರೂ. ಹಾಕುತ್ತೇನೆ. ಯುವಕರಿಗೆ ಉದ್ಯೋಗ, ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿಯವರು 10 ವರ್ಷಗಳವರೆಗೆ ಯಾವುದೇ ಜನಪರ ಯೋಜನೆ ಜಾರಿಗೊಳಿಸಿಲ್ಲ. ಮೋದಿ ಒಬ್ಬ ಮಹಾನ್ ಸುಳ್ಳುಗಾರ. ಈ ದೇಶ ಕಂಡ ದುರ್ಬಲ ಪ್ರಧಾನಿ ಎಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಮಾತನಾಡಿ, ಕ್ಷೇತ್ರದ ಜನತೆ ನನ್ನನ್ನು ಮಗಳಾಗಿ, ಸಹೋದರಿಯಾಗಿ ಸ್ವೀಕರಿಸಿದ್ದಾರೆ. ನನ್ನ ಗೆಲುವಿಗಾಗಿ ಹರಸುತ್ತಿದ್ದಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ಜಿಲ್ಲೆಯ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.
ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಿಕ ಮಾತನಾಡಿ, ಬಿಜೆಪಿ ನಾಯಕರು ಗಾಂಧಿ ಕುಟುಂಬದವರನ್ನು ಹೀಯಾಳಿಸುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಪ್ರಬುದ್ಧ ಮತದಾರರು 10 ವರ್ಷಗಳಿಂದ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ಅವಲೋಕನ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ರಸಗೊಬ್ಬರ, ಬಂಗಾರ ಎಲ್ಲದರ ದರ ಗಗನಕ್ಕೇರಿದೆ ಎಂದರು.
ಸಚಿವ ಶಿವಾನಂದ ಪಾಟೀಲ, ಶಾಸಕ ಜೆ.ಟಿ. ಪಾಟೀಲ, ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಸಚಿವ ಎಸ್.ಆರ್. ಪಾಟೀಲ, ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗಾರ ಮಾತನಾಡಿದರು.
ಮುಖಂಡರಾದ ಧರೆಪ್ಪ ಸಾಂಗಲಿಕರ, ಅಶೋಕ ಕಿವಡಿ, ರಾಘು ಮೋಕಾಸಿ, ಜಿ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ರಕ್ಷಿತಾ ಈಟಿ, ಸಂಜು ನಾಯಕ, ರಾಜುಗೌಡ ಪಾಟೀಲ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಫೀಕ್ ಬೇಪಾರಿ, ಲಕ್ಷ್ಮಣ ತಳೆವಾಡ, ಉದಯ ಸಾರವಾಡ, ವಿ.ಎನ್. ನಾಯಿಕ, ಸಿದ್ದಣ್ಣ ಕೊಣ್ಣೂರ ಇದ್ದರು.