ಮುದ್ದೇಬಿಹಾಳ: ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಜತೆ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಆಸರೆಯಾದ ನರೇಗಾ ಯೋಜನೆ ಪ್ರತಿ ಮನೆ-ಮನೆಗೂ ತಲುಪಬೇಕು ಎಂದು ತಾಪಂ ನರೇಗಾ ಸಹಾಯಕ ನಿರ್ದೇಶಕ ಪಿ.ಎಸ್.ನಾಯ್ಕೋಡಿ ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಕುರಿತು ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆ ಕಡೆಗೆ ಅಭಿಯಾನದಡಿ 2023-2024ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲು ಆದೇಶ ನೀಡಲಾಗಿದೆ. ಈ ಬಾರಿ ಮಹಿಳೆಯರ ಪ್ರಮಾಣ ಶೇ.65ರಷ್ಟು ಹೆಚ್ಚಿಸುವ ಉದ್ದೇಶದಿಂದ ಮಹಿಳಾ ಸಬಲೀಕರಣ ಅಭಿಯಾನ ಹಾಗೂ ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ತಾಪಂ ಐಇಸಿ ಸಂಯೋಜಕ ಪರಮೇಶ ಹೊಸಮನಿ ಮಾತನಾಡಿ, ಪ್ರತಿ ವರ್ಷದಂತೆ ಈ ವಷರ್ವು ಒಂದು ಕುಟುಂಬಕ್ಕೆ ನೂರ ದಿನಗಳ ಕಾಲ ಕೆಲಸ ಒದಗಿಸಲಾಗುತ್ತಿದೆ. ದಿನವೊಂದಕ್ಕೆ 309ರೂ. ಕೂಲಿ ನಿಗದಿಪಡಿಸಲಾಗಿದೆ. ಸರಾಸರಿ ದುಡಿದ ಕುಟುಂಬಕ್ಕೆ 30,900 ರೂ.ಕೂಲಿ ಪಾವತಿಯಾಗಲಿದೆ. ಎಂದರು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರ ಜತೆ ಪ್ರತಿ ಮನೆ ಅಂಗಳದಲ್ಲಿ ಕೃಷಿ ಪೌಷ್ಟಿಕ ತೋಟಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ಗ್ರಾಪಂ ಅಧಿಕಾರಿಗಳಾದ ಎ.ಎಸ್.ಮಲಗಲದಿನ್ನಿ, ಗಿರೀಶ ಬಿರಾದಾರ, ಡಿಇಒ ಪರಶುರಾಮ, ಜಿಕೆಎಂ ದೇವಮ್ಮ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿ ಇತರರಿದ್ದರು.