ನವದೆಹಲಿ: ಮಣಿಪುರ ಮತ್ತು ಅಸ್ಸಾಂನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಿ ತನ್ನ ದೇಶದಲ್ಲಿ ಭೂಗತರಾಗಿದ್ದ ಈಶಾನ್ಯ ರಾಜ್ಯಗಳ 22 ಬಂಡುಕೋರರನ್ನು ಪತ್ತೆ ಮಾಡಿದ ಮ್ಯಾನ್ಮಾರ್, ಅವರೆಲ್ಲರನ್ನೂ ಭಾರತಕ್ಕೆ ಹಸ್ತಾಂತರಿಸಿದೆ.
ಇವರೆಲ್ಲರನ್ನೂ ವಿಶೇಷ ವಿಮಾನದಲ್ಲಿ ಶುಕ್ರವಾರ ಭಾರತಕ್ಕೆ ಕರೆತರಲಾಯಿತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮ್ಯಾನ್ಮಾರ್ ಮಿಲಿಟರಿಯ ಕಮಾಂಡರ್ ಇನ್ ಚೀಫ್ ಮಿನ್ ಅಂಗ್ ಹ್ಲಾಹಿಂಗ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ಬಳಿಕ ಇವರೆಲ್ಲರನ್ನೂ ಬಂಧಿಸಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರೊನಾ ಹೊತ್ತಲ್ಲಿ ಚುನಾವಣೆ ವಿಷಯ ಪ್ರಸ್ತಾಪಿಸಿದ ಉಪೇಂದ್ರ!
ಭಾರತಕ್ಕೆ ಹಸ್ತಾಂತರಗೊಂಡಿರುವ 22 ಬಂಡುಕೋರರ ಪೈಕಿ 12 ಬಂಡುಕೋರರು ಮಣಿಪುರದಲ್ಲಿ ಕಾರ್ಯಾಚರಿಸುವ ಯುಎನ್ಎಲ್ಎಫ್, ಪ್ರಿಪಾಕ್ (ಪ್ರೋ), ಕೆವೈಕೆಎಲ್ ಮತ್ತು ಪಿಎಲ್ಎ ಬಂಡುಕೋರ ಸಂಘಟನೆಗಳಿಗೆ ಸೇರಿದವರು. ಉಳಿದ 10 ಜನರು ಅಸ್ಸಾಂನಲ್ಲಿ ಕಾರ್ಯಾಚರಿಸುವ ಎನ್ಡಿಎಫ್ಬಿ (ಎಸ್) ಮತ್ತು ಕೆಎಲ್ಒ ಬಂಡುಕೋರ ಸಂಘಟನೆಗಳಿಗೆ ಸೇರಿದವರು.
ಎನ್ಡಿಎಫ್ಬಿ (ಎಸ್) ಬಂಡುಕೋರ ಸಂಘಟನೆಯ ರಾಜೆನ್ ಡೈಮೇರಿ, ಯುಎನ್ಎಲ್ಎಫ್ನ ಸನತೋಂಬಾ ನಿಂಗಥುಜಾಮ್ ಮತ್ತು ಪ್ರಿಪಾಕ್ (ಪ್ರೋ) ಸಂಘಟನೆಯ ಪಶುರಾಮ್ ಲೈಷ್ರಾಂ ಭಾರತಕ್ಕೆ ಹಸ್ತಾಂತರಗೊಂಡಿರುವ ಪ್ರಮುಖ ಬಂಡುಕೋರ ನಾಯಕರಾಗಿದ್ದಾರೆ.
ಭಾರತ ಮತ್ತು ಮ್ಯಾನ್ಮಾರ್ ನಡುವೆ ಉತ್ತಮ ಸ್ನೇಹಸಂಬಂಧವಿದೆ. ಇದೀಗ ತಿಂಗಳಿಗೂ ಹೆಚ್ಚುಕಾಲ ಶೋಧ ಕಾರ್ಯಾಚರಣೆ ನಡೆಸಿ ಭಾರತಕ್ಕೆ ತುಂಬಾ ಬೇಕಾಗಿದ್ದ ಬಂಡುಕೋರರನ್ನು ಪತ್ತೆ ಮಾಡಿ, ಹಸ್ತಾಂತರಿಸುವ ಮೂಲಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮ್ಯಾನ್ಮಾರ್ ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲಿಗೆ ಮಣಿಪುರದ ಇಂಪಾಲಾದಲ್ಲಿ ಇಳಿಯಲಿರುವ ವಿಶೇಷ ವಿಮಾನ, ಆ ರಾಜ್ಯಕ್ಕೆ ಬೇಕಾಗಿದ್ದ ಬಂಡುಕೋರರನ್ನು ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಿದೆ. ಬಳಿಕ ಅಸ್ಸಾಂನ ಗುವಾಹಟಿಯಲ್ಲಿ ಉಳಿದ ಬಂಡುಕೋರರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಿದೆ ಎಂದು ತಿಳಿಸಿದ್ದಾರೆ.
ಕರೊನಾ ಹೊತ್ತಲ್ಲಿ ಚುನಾವಣೆ ವಿಷಯ ಪ್ರಸ್ತಾಪಿಸಿದ ಉಪೇಂದ್ರ!