ಶಿವಮೊಗ್ಗ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿಮಹಾರಾಜ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಗಾಂಧಿಬಜಾರ್ನ ಜೈನ ಸಮಾಜದವರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗಾಂಧಿಜಾರ್ನಿಂದ ಆಮರ್ ಅಹಮ್ಮದ್ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ್ ಅರಸು ರಸ್ತೆ, ಮಹಾವೀರ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಹಿಂಸೆಗೆ ಹೆಸರಾಗಿದ್ದ ನಂದಿಮಹಾರಾಜ ಅವರನ್ನು ಕಿಡಿಗೇಡಿಗಳು ಅಪಹರಿಸಿ ಅವರ ದೇಹವನ್ನು 9 ತುಂಡುತುಂಡಾಗಿ ಅಮಾನುಷವಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದಿದ್ದು ಅತ್ಯಂತ ಹೀನ ಕೃತ್ಯವಾಗಿದೆ. ನಂದಿ ಮಹಾರಾಜರು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದವರು. ಅಹಿಂಸೆಯೇ ಪರಮಧರ್ಮ ಎಂದುಕೊಂಡವರು. ಇಂತಹ ಮುನಿಗಳನ್ನು ಹತ್ಯೆ ಮಾಡಿದ್ದು, ಅತ್ಯಂತ ಅಮಾನುಷವಾಗಿದೆ. ಈ ಘೋರ ಕೃತ್ಯದ ಹಿಂದೆ ಅನೇಕರ ಕೈವಾಡವಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಜೈನಾಚಾರ್ಯರ, ಮುನಿ ಮಹಾರಾಜರ ರಕ್ಷಣೆಯನ್ನು ರಾಜ್ಯಸರ್ಕಾರವೇ ವಹಿಸಿ ರಕ್ಷಣೆ ನೀಡಬೇಕು. ಜೈನಾಚಾರ್ಯರು ತಂಗುವ ಎಲ್ಲ ಶಾಲಾ ಕಾಲೇಜುಗಳಿಗೆ ರಕ್ಷಣೆ ನೀಡಬೇಕು. ಈ ಕೃತ್ಯವನ್ನು ಸಿಬಿಐಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಒತ್ತಾಯಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ದೇವಿಚಂದ್ ಜೈನ್, ಚಂದನ್ಮಲ್ ಜೈನ್, ಮೋಹನ್ಲಾಲ್ ಜೈನ್, ಪ್ರಭಾಕರ ಗೋಗಿ, ಪಿ.ಕೆ.ಜೈನ್, ಧರಣೇಂದ್ರ ದಿನಕರ್, ಎಸ್.ದತ್ತಾತ್ರಿ, ರಮೇಶ್ಬಾಬು, ವಾಸುದೇವ್, ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.