ಮುದ್ದೇಬಿಹಾಳ: ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದ ಹಿನ್ನೆಲೆ ತಾಲೂಕಿನ ಗ್ರಾಮೀಣ ಭಾಗದ ಕೇಂದ್ರ ಸ್ಥಾನಗಳಲ್ಲಿ ಗ್ರಾಮಮಟ್ಟದ ಅಧಿಕಾರಿಗಳು ಮೊಕ್ಕಾಂ ಹೂಡುವಂತೆ ಸೂಚಿಸಲಾಗಿದೆ ಎಂದು ಬಿಸಿಎಂ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಆಶಾಪೂರ ಸೂಚನೆ ನೀಡಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಾರೀ ಮಳೆಯಾದರೆ ಉಂಟಾಗುವ ಪ್ರವಾಹ, ನದಿ, ಹಳ್ಳ ಕೊಳ್ಳಗಳಿಗೆ ಜನರು ಇಳಿಯದಂತೆ ಎಚ್ಚರಿಕೆ ವಹಿಸಲು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮನೆ ಬೀಳುವ ಪರಿಸ್ಥಿತಿಯಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಲ್ಲಿರಲು ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು. ತಹಸೀಲ್ದಾರ್ ಜಿ.ಎಸ್. ಮಳಗಿ, ತಾಪಂ ಇಒ ಶಶಿಕಾಂತ ಶಿವಪೂರೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.
ಬಿದ್ದ ಮನೆಗಳ ಸರ್ವೇ
ಒಂದೆಡೆ ಮಳೆ ಸುರಿಯುತ್ತಿದ್ದು ಮತ್ತೊಂದೆಡೆ ಅಧಿಕಾರಿಗಳು ಬಿದ್ದ ಹಾಗೂ ಭಾಗಶಃ ಹಾನಿಯಾದ ಮನೆಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸುತ್ತಿದ್ದಾರೆ. ತಾಲೂಕಿನ ಗಂಗೂರ, ಕಮಲದಿನ್ನಿ, ತಂಗಡಗಿ ಗ್ರಾಮಗಳಿಗೆ ಪಿಡಬ್ಲೂೃಡಿ ಅಧಿಕಾರಿಗಳಾದ ಸೋಮನಾಥ ಕೊಳಗೇರಿ, ಗ್ರಾಮಲೆಕ್ಕಾಧಿಕಾರಿ ಸಚಿನ್ ಗೌಡರ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.