ಮುದ್ದೇಬಿಹಾಳ: ಮದುವೆ ಸಂದರ್ಭದಲ್ಲಿ ಸಂಬಂಧಿಕರು, ಸ್ನೇಹಿತರು ವಿವಿಧ ಉಡುಗೊರೆಗಳನ್ನು ನವ ದಂಪತಿಗೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಪ್ರೀತಿ ಮೆರೆದಿದೆ.
ತಾಲೂಕಿನ ಸರೂರ ಗ್ರಾಮದ ಮುಖಂಡ ಬಸನಗೌಡ ಪಾಟೀಲ ಅವರ ಸಹೋದರ ಗಿರೀಶಗೌಡ ಪಾಟೀಲ ಅವರ ವಿವಾಹ ಬಾಗಲಕೋಟೆ ಜಿಲ್ಲೆಯ ಭಗವತಿಯ ಲಕ್ಷ್ಮೀ ಅವರೊಂದಿಗೆ ಸೋಮವಾರ ತಾಲೂಕಿನ ಸರೂರದ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಕರಿಗೆ, ಸ್ನೇಹಿತರಿಗೆ, ಗ್ರಾಮಸ್ಥರಿಗೆ ತಾವು ತರಿಸಿದ್ದ ಅಂದಾಜು 700 ಸಸಿಗಳನ್ನು ಗಿಫ್ಟ್ ಆಗಿ ನೀಡುವ ಮೂಲಕ ಪರಿಸರ ಪ್ರಜ್ಞೆಯನ್ನು ಮೂಡಿಸಿದರು.
ನವದಂಪತಿ ಕೊಟ್ಟ ಸಸಿಗಳಲ್ಲಿ ಮಾವು, ನಿಂಬೆ, ನುಗ್ಗೆ, ಪೇರಲ ಸೇರಿದ್ದವು. ಪರಿಸರ ಪ್ರೀತಿಗೆ ಮೆಚ್ಚಿದ ಸಂಬಂಧಿಕರು, ಸ್ನೇಹಿತರು ಖುಷಿಯಿಂದಲೇ ಸಸಿಗಳ ತೆಗೆದುಕೊಂಡು ಹೋದರು.
ಎಲ್ಲೆಡೆ ಪರಿಸರದ ವಿನಾಶದಿಂದ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ಸಹೋದರರ ಜತೆಗೂಡಿ ಮದುವೆಗೆ ಬರುವ ಸಂಬಂಧಿಕರಿಗೆ, ಸ್ನೇಹಿತರಿಗೆ ಉಡುಗೊರೆಯಾಗಿ ಸಸಿಗಳನ್ನು ಕೊಟ್ಟರೆ ಹೇಗೆ ಎಂಬ ಉದ್ದೇಶದಿಂದ 700 ಸಸಿಗಳನ್ನು ಕೊಟ್ಟಿದ್ದೇವೆ.
ಗಿರೀಶಗೌಡ ಹಾಗೂ ಲಕ್ಷ್ಮೀ, ಸಸಿ ವಿತರಿಸಿದ ನವದಂಪತಿ.